Vijaypura

ಮಹಾರಾಷ್ಟ್ರದ ಖ್ಯಾತೆಗೆ ಎದಿರೇಟು: ಒಗ್ಗಟ್ಟಿನ ಮಂತ್ರ ಜಪಿಸಿದ ಬಸವನಾಡಿನ ಜನಪ್ರತಿನಿಧಿಗಳು

Share

ಉತ್ತರ ಕರ್ನಾಟಕ ಜೀವನಾಡಿ ಕೃಷ್ಣೆಯ ಆಲಮಟ್ಟಿ ಆಣೆಕಟ್ಟು ಎತ್ತರಿಸುವದಕ್ಕೆ ನೆರೆಯ ರಾಜ್ಯ ಮಹಾರಾಷ್ಟ್ರ ತಕರಾರು ತೆಗೆಯುತ್ತಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರ ನಡೆಗೆ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. ಇತ್ತ ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಸಹ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಆಲಮಟ್ಟಿ ಆಣೆಕಟ್ಟು ಎತ್ತರದ ಕುರಿತು ಎದ್ದಿರುವ ಗೊಂದಲಕ್ಕೆ ತೆರೆ ಎಳೆಯಲು ಕಸರತ್ತು ನಡೆಸಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ. ಹಲವು ಜಿಲ್ಲೆಗಳ ಜನತೆಯ ಬಾಳಲ್ಲಿ ಬಂಗಾರವಾಗಿದೆ. ಕೃಷ್ಣಾ ನದಿಯ ನೀರೆ ರೈತರ ಬದುಕು ಹಸನು ಮಾಡುತ್ತಿದೆ. ಇದೀಗ ವಿಜಯಪುರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟು ಎತ್ತರದ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ನೆರೆಯ ರಾಜ್ಯ ಮಹಾರಾಷ್ಟ್ರ ಖ್ಯಾತೆ ತೆಗೆಯುತ್ತಿದೆ. ಆಲಮಟ್ಟಿ ಆಣೆಕಟ್ಟು ಎತ್ತರಿಸುವದರಿಂದ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ ಎಂಬುದು ಮಹಾರಾಷ್ಟ್ರದ ಆರೋಪವಾಗಿದೆ. ಇತ್ತ ಕರ್ನಾಟಕ ಜನಪ್ರತಿನಿಧಿಗಳು ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಇನ್ನು ಆಲಮಟ್ಟಿ ಅಣೆಕಟ್ಟೆ ಎತ್ತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಆಕ್ಷೇಪಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ರಾಜ್ಯದ ಹಕ್ಕನ್ನು ಮನವರಿಕೆ ಮಾಡಿಕೊಡಲು ಸಮಯ ಕೇಳುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸಿಎಂಗೆ ಪತ್ರ ಬರೆಯಲಿದ್ದು, ಎಲ್ಲ ಸಂಸದರ ಸಹಕಾರ ಕೋರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇತ್ತ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕೂಡಾ ಮಹಾರಾಷ್ಟ್ರ ದ ಸಿಎಂ ಗೆ ಸಲಹೆ ನೀಡಿದ್ದಾರೆ. ನಾಡಿನ ನೆಲ, ಜಲ, ಭಾಷೆ ವಿಷಯ ಬಂದಾಗ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಆಲಮಟ್ಟಿ ಡ್ಯಾಂ ಎತ್ತರಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರೋಧ ವ್ಯಕ್ತಪಡಿಸಿರುವುದರಲ್ಲಿ ಯಾವುದೇ ಹುರುಳಿಲ್ಲ. ಅನಗತ್ಯವಾಗಿ ವಿವಾದ ಸೃಷ್ಟಿಸಿ ಸಾಮರಸ್ಯ ಹಾಳು ಮಾಡಬಾರದೆಂದು ಮಹಾರಾಷ್ಟ್ರದ ಸಿಎಂ ಅವರಲ್ಲಿ ವಿನಂತಿ ಮಾಡುತ್ತೇನೆ ಎಂದಿದ್ದಾರೆ. ಇನ್ನೂ ಸಚಿವ ಶಿವಾನಂದ ಪಾಟೀಲ ಕೂಡಾ ಆಲಮಟ್ಟಿ ವಿಚಾರದಲ್ಲಿ ಸಕಾರಾತ್ಮಕ ಬೆಂಬಲ ಸೂಚಿಸಿದ್ದಾರೆ.

ಇನ್ನೂ ಬಿಜೆಪಿ ಉಚ್ಚಾಟಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಾ ಪ್ರತಿಕ್ರಿಯೆ ನೀಡಿ ಆಲಮಟ್ಟಿ ಅಣೆಕಟ್ಟೆ ಎತ್ತರ ಕುರಿತು ಎರಡೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ತಜ್ಞರನ್ನು ಕರೆದು ಚರ್ಚೆ ಮಾಡಬೇಕು. ಕರ್ನಾಟಕಕ್ಕೆ ಅನ್ಯಾಯವಾಗದ ಹಾಗೆ ನಡೆದುಕೊಳ್ಳಬೇಕು ಎಂದಿದ್ದಾರೆ. ಬಚಾವತ್ ಹಾಗೂ ಬ್ರಿಜೇಶ್ ಕುಮಾರ ವರದಿಯ ಪ್ರಕಾರ, ಆಲಮಟ್ಟಿ ಜಲಾಶಯಕ್ಕೆ 524.256 ಮೀ ಎತ್ತರಕ್ಕೆ ಅನುಮತಿ ಸಿಕ್ಕಿದೆ. ಮಹಾರಾಷ್ಟ್ರದವರು ಹೇಳುವ ಪ್ರಕಾರ ಸಾಂಗಲಿ ಜಿಲ್ಲೆಯ ಕೆಲ ಹಳ್ಳಿಯಲ್ಲಿ ನೀರು ನಿಲ್ಲುತ್ತದೆ. ಆದರೆ ಬಹುದೊಡ್ಡ ಸಮಸ್ಯೆ ಏನೂ ಇಲ್ಲ. ಮಹಾರಾಷ್ಟ್ರದವರು ಪ್ರಚೋದನೆ ಕೊಡಲು ಇಂತಹ ಹೇಳಿಕೆ ಕೊಡುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯವಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದಿದ್ದಾರೆ. ಆಲಮಟ್ಟಿ ಜಲಾಶಯದ ಎತ್ತರದ ವಿಚಾರ ರಾಜ್ಯ ಸರ್ಕಾರ ಗಮನ ಹರಿಸಬೇಕು.

ನಾನು ಕೂಡ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಅಂದಿನ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಮ್ಮ ವಾಜಪೇಯಿ ಸರ್ಕಾರಕ್ಕೆ ಬಹಳ ಬೆದರಿಕೆ ಹಾಕಿದ್ದರು. ಆಗ ನಾನು ಜಲಾಶಯ ಎತ್ತರದ ವಿಚಾರವಾಗಿ ಅನುಮತಿ ಕೊಡದಿದ್ದರೆ ನಾನು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ ಎಂದರು. ನಾನು ಹೇಳಿದ ಮೇಲೆ ಸ್ವತಃ ವಾಜಪೇಯಿ ಅವರು ಹರೀಶ ಸಾಳ್ವೆ ಎಂಬುವವರಿಗೆ ನಮ್ಮ ಮನೆಗೆ ಕಳುಹಿಸಿದ್ದರು. ಆಗ ಅನಂತಕುಮಾರ, ಬಸವರಾಜ್ ಪಾಟೀಲ, ಜಗದೀಶ್ ಶೆಟ್ಟರ್, ಡಾ.ತಂಗಾ ಅವರು ಹೋಗಿ ಹರೀಶ್ ಸಾಳ್ವೆ ಅವರಿಗೆ ತಿಳಿ ಹೇಳಿದೆವು. ನಾವು ಕುರ್ಚಿ ಹೋದರು ಪರವಾಗಿಲ್ಲ 519 ಮೀಟರ್ ಆಗಬೇಕು ಎಂದೆವು, ಅದಕ್ಕೆ ಈಗ ಆಗಿದೆ. ಈಗಿನ ಸಂಸದರು ಸಹಿತ ಅದೇ ಕೆಲಸ ಮಾಡಬೇಕು ಎಂದಿದ್ದಾರೆ.

ಒಟ್ನಲ್ಲಿ ಉತ್ತರ ಕರ್ನಾಟಕ ಜೀವನಾಡಿ ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ಮಹಾರಾಷ್ಟ್ರದ ಖ್ಯಾತೆಗೆ ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಏನೆ ಆಗಲಿ ಉತ್ತರ ಕರ್ನಾಟಕ ಜನತೆ ಹಾಗೂ ರೈತರ ಹಿತಾಸಕ್ತಿ ಕಾಪಾಡಲು ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!