ಹುಕ್ಕೇರಿ ತಾಲೂಕಿನ ಇಂಗಳಗಿಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಒಬ್ಬರಿಬ್ಬರನ್ನು ಬಂಧಿಸಿದಂತೆ ವೈರಲ್ ವಿಡ್ಹಿಯೋದಲ್ಲಿ ಕಾಣಿಸಿಕೊಂಡವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಬಿಜೆಪಿ ಮತ್ತು ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.
ಇಂದು ಬೆಳಗಾವಿಯ ಎಸ್ಪಿ ಕಾರ್ಯಾಲಯದ ಎದುರು ಬಿಜೆಪಿ ಮತ್ತು ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ ಹುಕ್ಕೇರಿ ತಾಲೂಕಿನ ಇಂಗಳಗಿಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದರು.
ಹುಕ್ಕೇರಿ ತಾಲೂಕಿನಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ಆತಂಕವಾದಿಗಳಂತೆ ಅಮಾನುಷವಾಗಿ ಹಲ್ಲೆಯನ್ನು ನಡೆಸಲಾಗಿದೆ. ವೈರಲ್ ಆದ ವಿಡ್ಹಿಯೋದಲ್ಲಿ ಕಾಣಿಸಿಕೊಂಡ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ ಆಗ್ರಹಿಸಿದರು.
ಇನ್ನು ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಪಾಟೀಲ್ ಅವರು, ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ಕೇವಲ ಒಬ್ಬರಿಬ್ಬರ ಮೇಲೆ ಪ್ರಕರಣ ದಾಖಲಿಸಿಕೊಳ್ಳದೇ, ಹಲ್ಲೆಯ ವಿಡ್ಹಿಯೋದಲ್ಲಿ ಕಾಣಿಸಿಕೊಂಡ ಎಲ್ಲರ ವಿರುದ್ಧ ಕ್ರಮಕೈಗೊಳ್ಳಬೇಕು. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಮತಾಂಧ ಶಕ್ತಿಗಳು ಬಾಲವನ್ನು ಬಿಚ್ಚುತ್ತಿವೆ. ಹಿಂದೂಗಳ ಮೇಲಿನ ಹಲ್ಲೆಯನ್ನು ತಡೆಯಲು ಸರ್ಕಾರ ವಿಫಲವಾಗಿದೆ. ಪೊಲೀಸ್ ಠಾಣೆಯಲ್ಲಿ ಯಾವುದೇ ರಾಜಿ ಸಂಧಾನವಾಗಿಲ್ಲ. ದೂರು ನೀಡಲು ಹೋದ ಶ್ರೀರಾಮಸೇನೆಯ ಅಧ್ಯಕ್ಷರನ್ನೇ ಪೊಲೀಸರು ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಈ ಕುರಿತಾದ ಮನವಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ್ ಗುಳೇದ್ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ಧರು.