Uncategorized

ಆಲಮಟ್ಟಿ ಅಣೆಕಟ್ಟು ಎತ್ತರ : ಉ.ಕ. ಜನಪ್ರತಿನಿಧಿಗಳು ಮೌನ ಮುರಿಯಲಿ : ರವಿ ಖಾನಾಪುರ

Share

ವಿಜಯಪುರ : ಮಹಾರಾಷ್ಟ್ರ ರಾಜ್ಯದಲ್ಲಿ ಉಂಟಾಗುವ ನದಿಗಳ ಪ್ರವಾಹಕ್ಕೂ, ಕರ್ನಾಟಕದ ಆಲಮಟ್ಟಿ ಶಾಸ್ತ್ರೀ ಸಾಗರ ಜಲಾಶಯದ ಗೇಟ್ ಎತ್ತರಕ್ಕೂ ಸಂಬಂಧವಿಲ್ಲ. ಆದರೂ ಮಹಾರಾಷ್ಟ್ರ ಜನಪ್ರತಿನಿಧಿಗಳು ಪದೇ ಪದೇ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ‌ ಆದರೆ ಮಹಾರಾಷ್ಟ್ರದಿಂದಲೇ ವಾಸ್ತವವಾಗಿ ಸಮಸ್ಯೆ ಎದುರಿಸುತ್ತಿರುವುದು ಕರ್ನಾಟಕವಾದರೂ ನಮ್ಮ ಜನಪ್ರತಿನಿಧಿಗಳು ಮೌನ ಮುರಿಯುತ್ತಿಲ್ಲ ಎಂದು ಕೃಷ್ಣಾ ಕಾಡಾ ಮಾಜಿ ನಿರ್ದೇಶಕ ರವಿ ಖಾನಾಪುರ ಹರಿಹಾಯ್ದಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ರವಿ ಖಾನಾಪುರ,
ಕಳೆದ ಎರಡು ದಶಕಗಳಿಂದ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರು ನಿಲ್ಲಿಸುತ್ತಿದ್ದರೂ ವಿಜಯಪುರ, ಬಾಗಲಕೋಟೆ ಲಕ್ಷಾಂತರ ಎಕರೆ ಜಮೀನು,‌ ಕೊಟ್ಯಂತರ ಜನ ಸಂತ್ರಸ್ತರಾದರೂ ಅವಳಿ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ದಕ್ಕಿಲ್ಲ. ಕೃಷಿಗಾಗಿ ನೀರಾವರಿ ಎನ್ನುವ ಬದಲು ಕುಡಿಯುವ ನೀರಿನ‌ ಹೆಸರು ಹೇಳಿಕೊಳ್ಳುವ ದುಸ್ಥಿತಿ ಇದೆ ಎಂದು ಕಿಡಿ ಕಾರಿದ್ದಾರೆ.

ಆಂದ್ರಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಹಾಗೂ ಅಲ್ಲಿನ ರಾಜಕಾರಣಿಗಳು ಒಂದಿಲ್ಲ ಒಂದು ರೀತಿಯಲ್ಲಿ ಅನಗತ್ಯವಾಗಿ ತಂಟೆ ತೆಗೆಯುವ, ಸುಳ್ಳು ಹೇಳುವ ಮೂಲಕ ಕರ್ನಾಟಕ ಕೃಷ್ಣಾ ಹಾಗೂ ಅದರ ಉಪ ನದಿಗಳ ರಾಜ್ಯದ ಪಾಲಿನ ನೀರು ಬಳಕೆ ಮಾಡಿಕೊಳ್ಳದಂತೆ ಜಂಟಿ ಹುನ್ನಾರ ನಡೆಸುತ್ತಿವೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಜನಪ್ರತಿನಿಧಿಗಳು, ವಿಶೇಷವಾಗಿ ವಿಜಯಪುರ, ಬಾಗಲಕೋಟೆ ಹೊರತಾಗಿ ಅತಿಹೆಚ್ಚು ನೀರಾವರಿ ಸೌಲಭ್ಯ ಕಂಡಿರುವ ಜಿಲ್ಲೆಗಳ ಜನಪ್ರತಿನಿಧಿಗಳು ಆಲಮಟ್ಟಿ ಶಾಸ್ತ್ರೀ ಸಾಗರ ಎತ್ತರದ ವಿಷಯದಲ್ಲಿ ಕನಿಷ್ಟ ಸೌಜನ್ಯದ ಹೇಳಿಕೆ ನೀಡುವ ಮೂಲಕ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಆಲಮಟ್ಟಿ ಜಲಾಶಯದ ಗೇಟ್ ಎತ್ತರಿಸುವ ವಿಷಯದಲ್ಲಿ ಈ ವರೆಗೆ ಯಾವುದೇ ರೀತಿಯ ತಕರಾರು ಎತ್ತಿರಲಿಲ್ಲ. ಆದರೆ ಇದೀಗ ದಿಡೀರನೆ ಮಹಾರಾಷ್ಟ್ರದ ಶಿರಡಿ ಶಾಸಕ ಆಲಮಟ್ಟಿ ಜಲಾಶಯದ ಗೇಟ್ ಎತ್ತರಿಸುವ ವಿಷಯದಲ್ಲಿ ಮೂಗು ತುರಿಸುವ ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಇದರ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡವೂ ಇದೆ ಎನ್ನುವ ಸಂಸಯ ಕಾಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಆಲಮಟ್ಟಿ ಶಾಸ್ತ್ರೀ ಸಾಗರದಲ್ಲಿ ನೀರು ನಿಲ್ಲಿಸುವುದಕ್ಕೂ ಮತ್ತು ಮಹಾರಾಷ್ಟ್ರದಲ್ಲಿ ಪ್ರಭಾವ ಉಂಟಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. 2019 ರಲ್ಲಿ ಕೃಷ್ಣಾ ನದಿ ನೀರು ಆಲಮಟ್ಟಿ ಶಾಸ್ತ್ರೀ ಸಾಗರಕ್ಕೆ ತಲುಪುವ ಮುನ್ನವೇ ಮಹಾರಾಷ್ಟ್ರ ರಾಜ್ಯದಲ್ಲಿ ರೌದ್ರ ಪ್ರವಾಹ ಸಂಭವಿಸಿತ್ತು‌. ಆದರೆ ಈ ವಾಸ್ತವ ಮರೆಮಾಚಲಾಗುತ್ತಿದೆ. ಆಲಮಟ್ಟಿ ಜಲಾಶಯದ ಹಿಂಭಾಗದಲ್ಲೇ ಕರ್ನಾಟಕದ ಹಿಪ್ಪರಗಿ ಅಣೆಕಟ್ಟು ಕೂಡ ಇದ್ದು, ಆ ಜಲಾಶಯಕ್ಕೆ ಯಾವುದೇ ತೊಂದರೆ ಆಗದು ಎಂದಾದರೆ, ಮಹಾರಾಷ್ಟ್ರ ರಾಜ್ಯದ ಮಿರಜ್-ಸಾಂಗ್ಲಿ ಪ್ರವಾಹಕ್ಕೆ ಆಲಮಟ್ಟಿ ಶಾಸ್ತ್ರೀ ಸಾಗರದಲ್ಲಿ ಸಂಗ್ರಹಿತ ಹಿನ್ನೀರು ಕಾರಣ ಎನ್ನುವ ಮೂಲಕ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳು ಕೃಷ್ಣಾ ನೀರಿನ ಬಳಕೆ ಮಾಡದಂತೆ ಕರ್ನಾಟಕ ರಾಜ್ಯದ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಈ ವಾಸ್ತವದ ಕುರಿತು ಕರ್ನಾಟಕ ರಾಜ್ಯದ ಜನಪ್ರತಿನಿಧಿಗಳು ಒಕ್ಕೋರಲ ಧ್ವನಿಬೆತ್ತಬೇಕು. ವಿಶೇಷವಾಗಿ ಕೃಷ್ಣಾ ಯೋಜನೆ ನೀರಿನ ಸೌಲಭ್ಯ ಪಡೆದಿರುವ ಉತ್ತರ ಕರ್ನಾಟಕ ಜಿಲ್ಲೆಗಳ ಹಾಲಿ- ಮಾಜಿ ಸಚಿವರು, ಸಂಸದರು, ಶಾಸಕರು, ರೈತರು ದ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

ಕೃಷ್ಣಾ ನ್ಯಾಯಾಧಕರಣದ ಅಂತಿಮ ತೀರ್ಪು ಹೊರಬಿದ್ದು ದಶಕ ಕಳೆದಿದ್ದರೂ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಕಾನೂನಿನ ತೊಡಕು ಬಾರದ ವಿಷಯಗಳ ಕುರಿತು ಮುಂದಡಿ ಇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ನೀರಿನ ಸೌಲಭ್ಯ ಪಡೆದಿರುವ ಜಿಲ್ಲೆಗಳ ಜನರು ಆಲಮಟ್ಟಿ ಶಾಸ್ತ್ರೀ ಸಾಗರಕ್ಕೆ ಗೇಟ್ ಎತ್ತರಿಸುವ ಕುರಿತು ಧ್ವನಿ ಎತ್ತದಿದ್ದರೆ ರಾಯಚೂರು, ಯಾದಗಿರಿ, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳಿಗೆ ಜಲಾಶಯದಿಂದ ನೀರು ಹರಿಸುವುದು ನಿಲ್ಲಿಸಿ ಸಂತ್ರಸ್ತ ಅವಳಿ ಜಿಲ್ಲೆಗಳ ರೈತರಿಗೆ ನೀರು ಹರಿಸಬೇಕು ಎಂದು ರವಿ ಖಾನಾಪುರ ಆಗ್ರಹಿಸಿದ್ದಾರೆ.

Tags:

bijapur inbelgaum innews vijapur vijaypur
error: Content is protected !!