ಆ ಮನೆಯಲ್ಲಿ ಮಗನ ಮದುವೆ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿತ್ತು, ಎಲ್ಲರ ಸಂಭ್ರಮದ ಮಧ್ಯೆ ವಧುವಿಗೆ ವರ ತಾಳಿ ಕಟ್ಟುವ ಕಾರ್ಯವೂ ಮುಗಿದಿತ್ತು, ಆದ್ರೆ ಮನೆಯವರ ಈ ಸಂಭ್ರಮ ಬಹಳ ಹೊತ್ತು ಉಳಿದಿರಲಿಲ್ಲ ಯಾಕಂದ್ರೆ ತಾಳಿ ಕಟ್ಟಿದ 20 ನಿಮಿಷಕ್ಕೆ ಮದುಮಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ. ಈ ದುರಂತದಿಂದ ಕ್ಷಣಾರ್ಧದಲ್ಲಿ ಮದುವೆ ಮನೆ ಸೂತಕದ ಮನೆಯಾಗಿತ್ತು. ಈ ಕುರಿತು ವರದಿ ಇಲ್ಲಿದೆ.
ಒಂದೆಡೆ ಮನೆ ಮಗನ ಮದುವೆಗಾಗಿ ಮಂಟಪ ಹಾಕಿ ಶೃಂಗಾರಗೊಂಡಿದ್ದ ಮನೆ, ಮತ್ತೊಂದೆಡೆ ಮದುವೆ ಮಂಟಪದಲ್ಲೇ ತಾಳಿ ಕಟ್ಟುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ ವರ, ಇವುಗಳ ಮಧ್ಯೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ. ಹೌದು, ತಾಳಿ ಕಟ್ಟಿ ಹೊಸ ಬದುಕಿನ ಸಂಭ್ರಮದಲ್ಲಿದ್ದ ವರ ಕೆಲವೇ ನಿಮಿಷಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಪ್ರವೀಣ್ (೨೪) ಹೃದಯಾಘಾತದಿಂದ ಮೃತಪಟ್ಟ ನತದೃಷ್ಟ.
ವೃತ್ತಿಯಲ್ಲಿ ಕೃಷಿಕನಾಗಿರುವ ಪ್ರವೀಣ್ ಹಾಗೂ ಪೂಜಾ ಅವರ ವಿವಾಹ ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇತ್ತ ಬೆಳಗ್ಗೆಯಿಂದ ಪೂಜೆ ವಿಧಾನಗಳಲ್ಲಿ ಪ್ರವೀಣ್ ಉತ್ಸಾಹದಿಂದ ಭಾಗವಹಿಸಿದ್ದರು. ಮಧ್ಯಾಹ್ನ ೧೨.೧೫ಕ್ಕೆ ಅಕ್ಷತಾರೋಪಣಕ್ಕಾಗಿ ವೇದಿಕೆ ಏರಿದರು. ತಾಳಿ ಕಟ್ಟಿ, ಹಾರ ಬದಲಾಯಿಸಿಕೊಂಡು ಖುಷಿಯಿಂದ ಜನರ ಶುಭಾಶಯ ಸ್ವೀಕರಿಸುತ್ತಿದ್ದರು. ಆಗ ಪ್ರವೀಣ್ಗೆ ಏಕಾಏಕಿ ತಲೆ ಸುತ್ತು ಬಂದಂತಾಗಿದೆ, ತಕ್ಚಣ ತಮ್ಮ ತಂದೆ ಶ್ರೀಶೈಲ ಅವರಿಗೆ ಪಿಸುಮಾತಿನಲ್ಲಿ ವಿಷಯವನ್ನ ಪ್ರವೀಣ ಹೇಳಿದ್ದಾನೆ. ತಂದೆ ನೀರು ತರಿಸಿ ಕೊಡುವಷ್ಟರಲ್ಲಿ ಪ್ರವೀಣ್ ಕುಸಿದುಬಿದ್ದಿದ್ದಾನೆ. ಇಷ್ಟಾಗುತ್ತಲೇ ಪ್ರವೀಣನನ್ನ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಷ್ಟೊತ್ತಿಗಾಗಲೇ ಪ್ರವೀಣ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ರು, ಇದರಿಂದ ಮನೆ ಮಂದಿಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು
ಇನ್ನು ಪ್ರವೀಣ್ ಸಾವಿನಿಂದ ಸಂಭ್ರಮದಲ್ಲಿದ್ದ ಮದುವೆ ಮನೆ ಮೌನವಾಯಿತು. ತಂದೆ, ತಾಯಿ , ಬಂಧು ಬಳಗಕ್ಕೆ ದಿಕ್ಕು ತೋಚದಂತಾಯಿತು. ಕಲ್ಯಾಣ ಮಂಟಪದಲ್ಲಿ ಮಂಟಪಗಳನ್ನ ತೆರವುಗೊಳಿಸಲಾಯಿತು, ಸಾವಿರಾರು ಜನರಿಗೆ ಮಾಡಿದ ಅಡುಗೆ ಊಟ ಬಡಿಸದಂತಾಯಿತು, ಮನೆ ಮುಂದಿನ ಪೆಂಡಾಲ್ ಸಾವಿನ ಮನೆಗೆ ಹಾಕಿದ ಶಾಮೀಯಾನ ಆಯ್ತು, ಮದುವೆಗೆ ಬಂದ ಜನರೆಲ್ಲಾ ಪ್ರವೀಣ್ ಅಂತ್ಯಕ್ರಿಯೆಗೆ ಜೊತೆಯಾಗುವಂತಾಯಿತು. ಇವುಗಳ ಮಧ್ಯೆ ಮನೆ ಮಂದಿಯ ಆಕ್ರಂದನವಂತೂ ಮುಗಿಲು ಮುಟ್ಟಿತ್ತು.
ಸದಾ ಉತ್ಸಾಹದಿಂದ ಇದ್ದ ಪ್ರವೀಣನಿಗೆ ಯಾವುದೇ ಹೃದಯ ಸಮಸ್ಯೆಯಿರಲಿಲ್ಲ. ಆದ್ರೂ ಹೃದಯಾಘಾತದಿಂದ ಜೀವ ಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು.

ಒಟ್ಟಿನಲ್ಲಿ ಖುಷಿ ಖುಷಿಯಾಗಿ ಮದುವೆಯಾಗಿ ತನ್ನ ಬಾಳ ಸಂಗಾತಿ ಜೊತೆ ಬಾಳಿ ಬದುಕಬೇಕಿದ್ದ ವರನೊಬ್ಬ ಮದುವೆ ದಿನವೇ ಮದುವೆ ಮಂಟಪದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದು ಮಾತ್ರ ವಿಪರ್ಯಾಸದ ಸಂಗತಿಯೇ ಸರಿ.