ಸಾಮಾನ್ಯವಾಗಿ ಹೂವುಗಳು ಎರಡು ಅಥವಾ ಮೂರು ದಿನಗಳಲ್ಲಿ ಬಾಡಿ ಹೋಗುವುದನ್ನು ನಾವು ನೋಡಿದ್ದೇವೆ. ಆದರೆ ಸುಮಾರು ಐವತ್ತು ವರ್ಷಗಳ ಹಿಂದಿನ ಹೂವು ಬಾಡದಿರುವುದನ್ನು ಕಂಡು ಗ್ರಾಮಸ್ಥರು ಅಚ್ಚರಿ ಪಡುವಂತಾಗಿದೆ.
ಹೌದು ಇಂತಹ ವಿಸ್ಮಯ ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವರ ದೇವಸ್ಥಾನದಲ್ಲಿ ಕಂಡು ಬಂದಿದೆ. ಬಹಳ ಹಳೆಯದಾಗಿರುವ ದೇವಸ್ಥಾನವನ್ನು ತೆರವುಗೊಳಿಸಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ಮಾಡಿದ ಗ್ರಾಮಸ್ಥರು ಗರ್ಭಗುಡಿಯಲ್ಲಿ ಶ್ರೀ ಮಾರುತಿ ದೇವರ ಮೂರ್ತಿ ಹಾಗೂ ಪಾದಗಳನ್ನು ಸುರಕ್ಷಿತವಾಗಿ ಬೇರೆ ಜಾಗಕ್ಕೆ ಸ್ಥಳಾಂತರ ಮಾಡುವ ಕಾರ್ಯ ಭರದಿಂದ ಸಾಗಿದೆ. ಈ ವೇಳೆ ಪಾದದ ಕೆಳಗೆ ಸುಮಾರು ಒಂದೂವರೆ ಅಡಿಯಷ್ಟು ಆಳದಲ್ಲಿ ಬಿಳಿ ಸೇವಂತಿಗೆ ಹೂವು ಪತ್ತೆಯಾಗಿದೆ. ಆದರೆ ಹೂವು ಬಾಡದೆ ಹಾಗೂ ಹಾಳಾಗದೆ ಹಾಗೆ ಇರುವುದನ್ನು ಕಂಡು ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ. ಅಲ್ಲದೇ ಗ್ರಾಮದ ಆರಾಧ್ಯದೈವ ಶ್ರೀ ಮಾರುತಿ ದೇವರ ಪವಾಡ ಸದೃಶ್ಯ ಎಂದು ಭಾವಿಸಿದ್ದಾರೆ.

ಶ್ರೀ ಮಾರುತಿ ದೇವರ ಪವಾಡದ ಕುರಿತು ಹಿರಿಯರು ಮಾತನಾಡುತ್ತಿದ್ದರು. ಅಲ್ಲದೆ ಆಗಾಗ್ಗೆ ಪವಾಡಗಳು ನಡೆಯುತ್ತಲೇ ಇರುತ್ತಿದ್ದವು. ಇದರಿಂದಾಗಿ ಈ ದೇವರ ಬಗ್ಗೆ ಗ್ರಾಮಸ್ಥರು ಭಯದ ಜತೆಗೆ ಶ್ರದ್ಧಾಭಕ್ತಿಯನ್ನು ಹೊಂದಿದ್ದರು. ಇದೀಗ ಐವತ್ತು ವರ್ಷಗಳ ಹಿಂದೆ ದೇವಸ್ಥಾನ ನಿರ್ಮಿಸಿ ಶ್ರೀ ವೀರಾಂಜನೇಯ ಮೂರ್ತಿ ಹಾಗೂ ಪಾದಗಳನ್ನು ಪ್ರತಿಷ್ಠಾಪಿಸುವ ಸಮಯದಲ್ಲಿ ಹೂವನ್ನು ಪಾದದ ಕೆಳಗೆ ಹಾಕಿದ್ದರು. ಇದಿಗ ಪತ್ತೆಯಾಗಿರುವ ಹೂವು ಬಾಡದೆ ಹಾಗೂ ಹಾಳಾಗದೆ ಪತ್ತೆಯಾಗಿರುವುದು ಇದೀಗ ಅಚ್ಚರಿಗೆ ಕಾರಣವಾಗಿದೆ.
ಈ ದೇವಸ್ಥಾನದಲ್ಲಿದ್ದ ಗ್ರಾಮ ದೇವತೆ, ಗಣಪತಿ ಹಾಗೂ ಬಾಹುಬಲಿ ಮೂರ್ತಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.