ಎರಡು ವಾಹನಗಳಲ್ಲಿ ಶಸ್ತ್ರಸಜ್ಜಿತರಾಗಿ ಪೆಟ್ರೋಲ್ ಪಂಪ್ ಮಾರ್ಗವಾಗಿ ಆಲಮಟ್ಟಿಯ ಪ್ರವೇಶ ದ್ವಾರಕ್ಕೆ ಬಂದ ಉಗ್ರರು, ಅಲ್ಲಿನ ಚೆಕ್ ಪೋಸ್ಟ್ನಲ್ಲಿ ಉಗ್ರರ ದಾಳಿಗೆ ನೆಲಕ್ಕುರಳಿದ ಪೊಲೀಸರು, ಪ್ರವಾಸಿಗರನ್ನು, ಕೆಬಿಜೆಎನ್ಎಲ್ ನಿಗಮದ ಅಧಿಕಾರಿಗಳನ್ನು ಒತ್ತೆಯಾಳಾಗಿರಿಸಿಕೊಂಡ ಉಗ್ರರು, ಮೊಳಗಿದ ತುರ್ತು ಸೈರನ್, ಅಲರ್ಟ್ ಆದ ಪೊಲೀಸರು.
ಇದು, ಶನಿವಾರ ಸಂಜೆ ನಡೆದ ಅಣಕು ಪ್ರದರ್ಶನದ ದೃಶ್ಯ. ಈ ದೃಶ್ಯಗಳು ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ… ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಎರಡು ಜಿಲ್ಲೆಯ ಪೊಲೀಸರು, ಕೆಎಸ್ಐಎಸ್ಎಫ್ ಪೊಲೀಸರು, ಆರೋಗ್ಯ, ಅಗ್ನಿಶಾಮಕ, ಹೋಂಗಾರ್ಡ್ ಸೇರಿದಂತೆ ನಾನಾ ಇಲಾಖೆಗಳ ಸಂಯೋಜನೆಯಲ್ಲಿ ಅಣಕು ಕಾರ್ಯಾಚರಣೆ ನಡೆಯಿತು. ಬೆಳಿಗ್ಗೆಯಿಂದಲೇ ಎರಡು ಜಿಲ್ಲೆಯ ಎಸ್ಪಿಗಳು ಮಾರ್ಗದರ್ಶನ ನೀಡಿ ಅಣಕು ಪ್ರದರ್ಶನಕ್ಕೆ ಸಿಬ್ಬಂದಿಯನ್ನು ಸಜ್ಜುಗೊಳಿಸಿದರು. ಉಗ್ರರ ದಾಳಿಯಾದಾಗ ರಕ್ಷಣೆ, ಜಾಗೃತಿ ಕುರಿತು ತಿಳುವಳಿಕೆ ಮೂಡಿಸಲಾಯಿತು.
