ಚಿಕ್ಕೋಡಿ : ಗುರುವಾರ ಪೇಠದ ರಸ್ತೆ ಅಗಲೀಕರಣದಿಂದಾಗಿ ಈ ಭಾಗದ ಜನರಿಗೆ ಸಾಕಷ್ಟು ಸಹಕಾರಿಯಾಗಲಿದೆ. ಅದಕ್ಕಾಗಿ ಇಲ್ಲಿನ ವ್ಯಾಪಾರಸ್ಥರು ರಸ್ತೆ ಅಗಲೀಕರಣಕ್ಕಾಗಿ ತಮ್ಮ ಅಂಗಡಿ ಮುಗ್ಗಟ್ಟಗಳನ್ನು ತೆರವು ಮಾಡಿಕೊಡಬೇಕು ಎಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು. ಚರಮೂರ್ತಿ ಮಠದಲ್ಲಿ ರಸ್ತೆ ಅಗಲೀಕರಣದಲ್ಲಿ ಜಾಗವನ್ನು ಕಳೆದುಕೊಂಡ 11 ಜನ ವ್ಯಾಪಾರಸ್ಥರಿಗೆ ಸಾಂಕೇತವಾಗಿ ಪರಿಹಾರ ವಿತರಿಸಿ ಮಾತನಾಡಿದರು.
ಮಳೆಗಾಲ ಪ್ರಾರಂಭವಾಗುವ ಮುನ್ನವೇ ವ್ಯಾಪಾರಸ್ಥರು ತಮ್ಮ ಜಾಗವನ್ನು ನೀಡಬೇಕು. ಜಾಗವನ್ನು ತೆರವು ಮಾಡಿದವರಿಗೆ ನೇರವಾಗಿ ಅವರ ಖಾತೆಗಳಿಗೆ ಅಧಿಕಾರಿಗಳು ಹಣ ಜಮಾ ಮಾಡುತ್ತಿದ್ದಾರೆ ಎಂದರು. ಪಟ್ಟಣದ ಸೌಂದರ್ಯಕರಣಕ್ಕಾಗಿ ಎಲ್ಲಾರೂ ಕೈಜೋಡಿಸುವಂತೆ ಮನವಿಯನ್ನು ಮಾಡಿಕೊಂಡರು. ವೇಗವಾಗಿ ಬೆಳೆಯುತ್ತಿರುವ ಚಿಕ್ಕೋಡಿ ಪಟ್ಟಣಕ್ಕೆ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ಇಲ್ಲಿಯ ವರೆಗೆ ಯಾರೂ ಮಾಡದೆ ಇರುವ ಕಾರ್ಯವನ್ನು ಪ್ರಕಾಶ ಹುಕ್ಕೇರಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಲೋಕೊಪಯೋಗಿ ಇಲಾಖೆ ಎಇ, ಎಸ್.ಕೆ. ಎಂಟೆತ್ತಿನವರ ಮಾತನಾಡಿ ಒಟ್ಟು 151 ವ್ಯಾಪಾರಸ್ಥರು ತಮ್ಮ ಜಾಗವನ್ನು ಗುರುವಾರ ಪೇಠದಲ್ಲಿ ನೀಡಬೇಕಾಗುತ್ತದೆ. ಅವರಿಗೆ ಸರ್ಕಾರದಿಂದ ಪರಿಹಾರ ವಿತರಣೆ ಮಾಡಲಾಗುವುದು. ಈಗಾಗಲೇ ಸರ್ವೇ ಕಾರ್ಯ ಮುಗಿದಿದೆ. ಆದಷ್ಟು ಬೇಗನೆ ಅಲ್ಲಿನ ವ್ಯಾಪಾರಸ್ಥರು ತೆರವು ಮಾಡುವ ಮೂಲಕ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುಭಾಷ ಕೌಲಾಪುರೆ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರೆ, ಪ್ರಭಾಕರ ಕೋರೆ, ಹಾಗೂ ಗಣ್ಯ ವ್ಯಾಪಾರಸ್ಥರು ಭಾಗವಹಿಸಿದ್ದರು.