ಕಾಶ್ಮೀರದ ಪೆಹಲ್ಗಾಮ್’ನಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸಿದೆ, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಒಕ್ಕೊರಲಿನಿಂದ ಆಗ್ರಹ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯದ ಸಚಿವರಾದ ಸಂತೋಷ ಲಾಡ್ ಅವರು ಪ್ರಧಾನಿಗಳ ರಾಜೀನಾಮೆ ಕೇಳುತ್ತಿದ್ದಾರೆ, ಇದು ಖಂಡನೀಯ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿ ದೇಶದಲ್ಲಿ ಚರ್ಚೆಯ ವಿಷಯವಾಗಿದೆ, ಮೃತರಿಗೆ ಸಂತಾಪ ಕಾರ್ಯಕ್ರಮ ನಡೆಯುತ್ತಿವೆ. ಪ್ರಧಾನಿಗಳ ನಿರ್ಣಯಗಳಿಗೆ ವಿರೋಧ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೇ ಸಹಿತ ಸಹಮತ ಸೂಚಿಸಲಾಗಿದೆ. ಆದರೆ ಸಚಿವ ಸಂತೋಷ ಲಾಡ್ ಹಾಗೂ ಕಾಂಗ್ರೆಸ್ ವಕ್ತಾರ ದೇಶದ ಮಿಲಿಟರಿ ಬಗ್ಗೆ ಸಂಶಯ ಬಗ್ಗೆ ಕೇಳಿಕೆ ಕೊಟ್ಟಿದ್ದಾರೆ. ಕಾಶ್ಮೀರದ ಸಮಸ್ಯೆ ಬಗ್ಗೆ ಸಂತೋಷ ಲಾಡ್ ಅವರು ಅರ್ಥ ಮಾಡಿಕೊಳ್ಳಬೇಕು, ಇದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು, ಕಾಶ್ಮೀರದಲ್ಲಿನ ಸಮಸ್ಯೆಗಳಿಗೆ ಕಾಂಗ್ರೆಸ್’ನ ನೆಹರೂ ಅವರೇ ಕಾರಣ ಆಗಿದ್ದಾರೆ ಎಂದು ಹೇಳಿದರು.

ಇದೀಗ ಮೋದಿ ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿ, ಅದ್ಬುತ ಬೆಳವಣಿಗೆ ಮಾಡುತ್ತಿದ್ದಾರೆ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ, ಅಭಿವೃದ್ಧಿ ಕಾರ್ಯ ನಡೆಯುತ್ತಿದೆ, ಇದನ್ನು ಸಹಿಸದ ಇಸ್ಲಾಮಿಕ್ ಭಯೋತ್ಪಾದಕರು ದಾಳಿ ಮಾಡಿದ್ದಾರೆ, ಇದರ ಬಗ್ಗೆ ಸಂತೋಷ ಲಾಡ್ ಅವರು ಮಾತನಾಡಬೇಕಿತ್ತು, ಇದೀಗ ಸಂತೋಷ ಲಾಡ್ ಯಾವ ನೈತಿಕತೆ ಇಟ್ಟುಕೊಂಡು ಪ್ರಧಾನಿಗಳ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ದೇಶದಲ್ಲಿ ಈ ಹಿಂದೆ ಭಯೋತ್ಪಾದಕ ದಾಳಿಗಳಾದಾಗ ದೇಶ ಬೇರೆಯವರ ಸಹಾಯ ಕೇಳುವ ಪರಿಸ್ಥಿತಿ ಇತ್ತು, ಇದೀಗ ಬೇರೆ ದೇಶಗಳು ಸಮಸ್ಯೆಗಳಿಗೆ ಸಿಲುಕಿದಾಗ ಭಾರತದ ಸಹಾಯ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. 2004 ರಿಂದ 2014 ರವರೆಗೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದೆಹಲಿ, ವಾರನಾಸಿ, ಮುಂಬೈ, ಹೈದರಾಬಾದ್, ಜೈಪುರ, ಅಹಮದಾಬಾದ್, ಮುಂಬೈ, ಪುಣೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಉಗ್ರರ ದಾಳಿ ನಡೆದಿವೆ, ಇದರಲ್ಲಿ ನೂರಾರು ಜನರ ಸಾವಾಗಿವೆ. ಅದೇ ತರಹ ಸಂತೋಷ ಲಾಡ್ ಅವರು ಸಹ ಬಿಜೆಪಿ ಆಡಳಿತ ಅವಧಿಯಲ್ಲಿ ಏನಾಗಿದೆ ಎಂಬುದನ್ನು ಅಂಕಿಸಂಖ್ಯೆಗಳ ಸಮೇತ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.
ಸಂತೋಷ ಲಾಡ್ ಅವರಿಗೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಆಡಳಿತ ತೃಪ್ತಿ ತಂದಿಲ್ಲ ಅನಿಸುತೆ, ಹೀಗಾಗಿ ಅವರೇ ಕೇಂದ್ರದ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಲಿ, ಈ ಮೂಲಕ ತಮ್ಮ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಲಿ ಎಂದು ಮಹೇಶ ಟೆಂಗಿನಕಾಯಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ರಾಜು ಕಾಳೆ, ಮಂಜುನಾಥ ಕಾಟಕರ್, ರವಿ ನಾಯಕ ಇದ್ದರು.