ಪಹಲ್ಗಾಮ ಗುಂಡಿನ ದಾಳಿಯಲ್ಲಿ ಮೃತಪಟ್ಟವರಿಗೆ ಏಳು ಕೋಟಿ ಕನ್ನಡಿಗರು ಹಾಗೂ ಸರ್ಕಾರದ ಪರವಾಗಿ ಸಿಎಂ ಸಿದ್ದರಾಮಯ್ಯ ಶ್ರದ್ಧಾಂಜಲಿ ಅರ್ಪಿಸಿ ಮೃತರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರ ಘೋಷಿಸಿದರು

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಭರತ ಭೂಷಣ ಸಹಿತ ಮೂವರಿಗೆ ಏಳು ಕೋಟಿ ಕನ್ನಡಿಗರು ಹಾಗೂ ಸರ್ಕಾರದ ಪರವಾಗಿ ಸಿಎಂ ಸಿದ್ದರಾಮಯ್ಯ ಶ್ರದ್ಧಾಂಜಲಿ ಅರ್ಪಿಸಿದರು. ಚಿಕ್ಕ ವಯಸ್ಸಿನಲ್ಲಿ ಯುವಕರಿಗೆ ಈ ರೀತಿ ಆಗಬಾರದಾಗಿತ್ತು ಇದು ಅತ್ಯಂತ ದುಃಖದಾಯಕ ಸಂಗತಿ. ಈ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ಸರ್ಕಾರದ ಜವಾಬ್ದಾರಿ.ಉಗ್ರರು ಮತ್ತು ಉಗ್ರ ಚಟುವಟಿಕೆಗಳು ನಮ್ಮ ದೇಶದಲ್ಲಿ ಇರಬಾರದು. ಸರ್ಕಾರ ಯಾವುದೇ ಕಾರಣಕ್ಕೂ ಇದರಲ್ಲಿ ರಿಯಾಯಿತಿ ತೋರಿಸಬಾರದು. ಕೇಂದ್ರ ಸರ್ಕಾರದೊಂದಿಗೆ ನಾವೆಲ್ಲರೂ ಇದ್ದೇವೆ. ಎಲ್ಲ ಉಗ್ರರನ್ನು ನಾಶಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಕಾಶ್ಮೀರಕ್ಕೆ ಹೋಗಿದ್ದ ಅಮಾಯಕ ಜನರ ಮೇಲೆ ಹಾಡು ಹಗಲೇ ಪತ್ನಿಯರ ಎದುರು ಗುಂಡಿಟ್ಟುಕೊಲ್ಲುವಂತದ್ದು ಅತ್ಯಂತ ಹೇಯ ಕೃತ್ಯವಾಗಿದ್ದು ಮನುಷ್ಯತ್ವ ಇಲ್ಲದ ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಅದೇ ಜಿಲ್ಲೆಯಲ್ಲಿ ಘಟನೆ ಮತ್ತೆ ಮರುಕಳಿಸಿದ್ದು,ಈ ಹಿಂದೆ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಜನ ಸೈನಿಕರು ಮೃತಪಟ್ಟರು.ಮುಂದೆ ಇಂಥ ಘಟನೆಗಳು ಮತ್ತೆ ಮರುಕಳಿಸದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಉಗ್ರರು ಎಲ್ಲೇ ಇದ್ದರೂ ಅವರನ್ನು ಪತ್ತೆ ಹಚ್ಚಿ ನಮ್ಮ ದೇಶದಲ್ಲಿ ಇರದಂತೆ ನೋಡಿಕೊಳ್ಳುವ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ಇದು ಇಂಟಲಿಜೆಂಟ್ಸ್ ಫೇಲ್ಯೂರ್ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಆಂಧ್ರದವರು ಒಬ್ಬರು ಹಾಗೂ ಶಿವಮೊಗ್ಗದವರೊಬ್ಬರು ಮೃತಪಟ್ಟಿದ್ದು ಅವರಿಗೂ ಕೂಡ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದ ಸಿಎಂ ಮೃತರ ಕುಟುಂಬದವರಿಗೆ ಸರ್ಕಾರದಿಂದ ತಲಾ10 ಲಕ್ಷ ಪರಿಹಾರ ಘೋಷಿಸಿದ್ದು, ಸರ್ಕಾರ ಯಾವಾಗಲೂ ಅವರ ಕುಟುಂಬದವರ ಜೊತೆ ಇರುತ್ತದೆ. ಸಚಿವ ಸಂತೋಷ ಲಾಡ್ ಹಾಗೂ ಅಧಿಕಾರಿಗಳ ತಂಡ ಕಾಶ್ಮೀರದಿಂದ ಮೃತದೇಹಗಳನ್ನು ಹಾಗೂ ಕಾಶ್ಮೀರ್ ಪ್ರವಾಸಕ್ಕೆ ತೆರಳಿದ್ದ ಉಳಿದ 177 ಕನ್ನಡಿಗರನ್ನು ಸುರಕ್ಷಿತವಾಗಿ ತರುವ ಕೆಲಸ ಮಾಡಿದ್ದಾರೆ. ಇದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯ. ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘಟನೆಗಳು ಮರುಕಳಿಸಿದಂತೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ನಾವು ಸದಾ ಕಾಲ ಕೇಂದ್ರದೊಂದಿಗೆ ಇದ್ದೇವೆ ಎಂಬ ಭರವಸೆಯನ್ನು ಸಿಎಂ ನೀಡಿದರು.
ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಇತರರು ಇದ್ದರು