ಸೌಲಭ್ಯಗಳಿಂದ ವಂಚಿತ ಸಮಾಜಗಳಿಗೆ ನ್ಯಾಯ ದೊರಕಿಸುವ ಉದ್ಧೇಶದಿಂದ ಸುಮಾರು 160 ಕೋಟಿ ವೆಚ್ಚದಲ್ಲಿ ಮಾಡಲಾದ ಜಾತಿಗಣತಿಯ ವರದಿಯನ್ನು ಸರ್ಕಾರ ಜಾರಿ ಮಾಡಲು ಬದ್ಧವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ನುಡಿದರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ರಾಜ್ಯಮಟ್ಟದ 7ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಿತು. ಈ ವೇಳೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಜಾತಿ ಜನಗಣತಿ ವಿಚಾರ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಹಲವರು ರಾಜಕೀಯ ವಿಚಾರ ಎನ್ನುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯನವರು ಸುಮಾರು 160 ಕೋಟಿ ರೂಪಾಯಿ ವೆಚ್ಚ ಮಾಡಿ ಜಾತಿಗಣತಿ ಮಾಡಿದ್ದಾರೆ. ಆ ವೇಳೆ ಯಾರೂ ವಿರೋಧ ಮಾಡಲಿಲ್ಲ. ಈಗ ವರದಿ ಬಂದ ಮೇಲೆ ಅದನ್ನು ಜಾರಿಗೊಳಿಸಲು ತಡೆಯುವಂತಹ ಶಕ್ತಿಗಳು ಸರ್ಕಾರಕ್ಕೆ ಸವಾಲಾಗಿ ನಿಂತುಕೊಂಡಿವೆ. ಆದರೇ ಸಿಎಂ ಸಿದ್ಧರಾಮಯ್ಯ ಇದನ್ನ ಜಾರಿಗೊಳಿಸಲಿದ್ದು, ಅದರ ಆಧಾರದ ಮೇಲೆ ಸೌಲಭ್ಯ ವಂಚಿತರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ಇದಕ್ಕಾಗಿ ಜಾತಿ ಗಣತಿ ಅವಶ್ಯಕವಾಗಿದೆ ಎಂದರು.
ಇನ್ನು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸರ್ಕಾರದಲ್ಲಿ ಖಾಲಿಯಿರುವ ಬಾಕಲಾಗ್ ಹುದ್ಧೆಗಳನ್ನು ಭರ್ತಿ ಮಾಡುವ ಕೆಲಸ ಕಾಂಗ್ರೆಸ್ ಅವಧಿಯಲ್ಲಿ ಮಾಡಲಾಗುವುದು. ಅಲ್ಲದೇ ಉದ್ಯಮಿಗಳಾಗಿ ಹೊಸದನ್ನು ರಾಜ್ಯಕ್ಕೆ ನೀಡಬೇಕು. ಶೇ. 75 ರಷ್ಟು ಸಬ್ಸಿಡಿ ನೀಡಿ ಭೂಮಿ ಖರೀದಿ, ಸಾಲ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಡಾ.ಬಾಬಾಸಾಹೇಬ ಅಂಬೇಡ್ಕರರು ಹೇಳಿದಂತೆ ಈ ಜನಾಂಗವರು ಬೇಡುವ ಕೈಯಲ್ಲ ಕೊಡುವ ಕೈಯಾಗಬೇಕು. ಸಮಾಜವು ಈ ನಿಟ್ಟಿನಲ್ಲಿ ಸಂಕಲ್ಪವನ್ನು ಕೈಗೊಂಡು ಅಭಿವೃದ್ಧಿ ಹೊಂದಬೇಕು. ಸಮಾಜದ ಮಠ ನಿರ್ಮಾಣವಾದಾಗಿನಿಂದ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ ಎಂದರು.