ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಕ್ಕೆ ಹಿರಿಯರು ಬೈದು ಬುದ್ದಿ ಹೇಳಿದ್ದಕ್ಕೆ ಸಿಟ್ಟಿಗೆದ್ದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಕೇವಲ 24 ಗಂಟೆಯಲ್ಲಿ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕಾಶ ಮಾರುತಿ ಹಿರಟ್ಟಿ (26) ಎಂಬಾತ ಹೂಲಿಕಟ್ಟಿ ಶಿವಲಿಂಗೇಶ್ವರ ಜಾತ್ರೆ ಮುಗಿಸಿ ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ಅಪರಿಚಿತರು ಅಡ್ಡಗಟ್ಟಿ ಕೊಲೆ ಮಾಡಿದ್ದರು. ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕೊಳವಿ ಗ್ರಾಮದ ಮೃತ ಪ್ರಕಾಶ್ ಹಾಗೂ ಆತನ ಸ್ನೇಹಿತ ಕುಮಾರ ನಾಯಿಕ ಎಂಬಾತನ ಜೊತೆ ಡಿಸೆಂಬರ್ ನಲ್ಲಿ ಕೊಳವಿಯ ಗುಳಿಬಸವೇಶ್ವರ ಜಾತ್ರೆಯಲ್ಲಿ ಸಣ್ಣ ಜಗಳವಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಬುದ್ದಿವಾದ ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಕುಮಾರ್ ತನ್ನ ಏಳು ಜನ ಸ್ನೇಹಿತರ ಜೊತೆಗೂಡಿ ಪ್ರಕಾಶ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಎಂದು ಹೇಳಿದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಳವಿ ಗ್ರಾಮದ ಕುಮಾರ್ ನಾಯಿಕ, ರವೀಂದ್ರ ಪತ್ರೊಟ್, ಉಮೇಶ್ ಕಂಬಾರ, ಅಭಿಷೇಕ ಪತ್ರೊಟ್, ಮನೋಜ್ ಪತ್ರೊಟ್, ಬೈಲಹೊಂಗಲದ ಮಾರುತಿ ವಡ್ಡರ್ ಸೇರಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು…