ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾಹಸ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಇವರುಗಳ ಸಂಯುಕ್ತಾಶ್ರದಲ್ಲಿ ಗ್ರಾಮೀಣ ಯುವತಿಯರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಹುಕ್ಕೇರಿ ತಾಲೂಕಿನ ಯಲ್ಲಾಪೂರ ಗ್ರಾಮದಲ್ಲಿ ತರಬೇತಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾದ ಸಾಹಸ ಸಂಸ್ಥೆಯ ಯೋಜನಾ ಸಂಯೋಜಕರಾದ ಮಯೂರ ಸಾಬೋಜಿ ಮಾತನಾಡಿ ಗ್ರಾಮೀಣ ಮಹಿಳೆಯರು ಜಾಗೃತರಾಗಿ, ಪ್ರತಿ ಮನೆ ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಹಸಿ ತ್ಯಾಜ್ಯ, ಒಣ ತ್ಯಾಜ್ಯವನ್ನು ವಿಂಗಡಣೆ ಮಾಡಿ ಮನೆ ಹಂತದಲ್ಲಿ ಪೈಪ ಕಾಂಪೋಸ್ಟ್, ಮಡಿಕೆ ಕಾಂಪೋಸ್ಟ್ ಮೂಲಕ ಗೊಬ್ಬರವಾಗಿ ಪರಿವರ್ತಿಸಬಹುದು ಹಾಗೂ ಒಣ ತ್ಯಾಜ್ಯವಾದ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು, ಕಸವನ್ನು ಎಲ್ಲೆಂದರೆಲ್ಲಿ ಬಿಸಾಡುವುದು,ಸುಡುವುದು, ನೀರಿಗೆ ಹಾಕುವುದನ್ನು ಮಾಡದೆ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇನ್ನೂರ್ವ ಸಂಪನ್ಮೂಲ ವ್ಯಕ್ತಿ ಕೃಷ್ಣಾ ಗುಮಾಸ್ತೆ ಮಾತನಾಡಿ ಪ್ಲಾಸ್ಟಿಕ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಅತೀ ಪ್ಲಾಸ್ಟಿಕ ಬಳಕೆಯಿಂದ ವಿವಿಧ ಬಗೆಯ ಕ್ಯಾನ್ಸರ ರೋಗಕ್ಕೆ ಕಾರಣವಾಗುತ್ತಿದೆ,ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ,ಚರ್ಮ ರೋಗದ ಹೆಚ್ಚಳ, ಮೆದಳು ಮತ್ತು ಕಣ್ಣುಗಳಿಗೆ ಹಾನಿಯನ್ನುಂಟು ಮಾಡುತ್ತಿದ್ದು ಯುವಜನತೆ ಎಚ್ಚತ್ತುಕೊಂಡು ಬಳಕೆ ನಿಲ್ಲಿಸಬೇಕಾಗಿದೆ ಎಂದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಬುಮ್ಮಣ್ಣವರ ವಿಷಯದ ಮೇಲೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಚಾಯ್ರಾದ ಕಿರಣ ಚೌಗಲಾ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಆನಂದ ಕುಡ್ಡಣ್ಣವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಘೋರ್ಪಡೆ ವಂದಿಸಿದರು.
