Belagavi

ಹಿಜಾಬ್ ನಮ್ಮ ಹಕ್ಕು: ಹಿಜಾಬ್ ಧರಿಸಲು ನಮಗೆ ಅವಕಾಶ ಕೊಡಿ: ಬೆಳಗಾವಿಯಲ್ಲಿ ಧರಣಿ

Share

ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಪರ-ವಿರೋಧ ಬುಗಿಲೆದ್ದಿದೆ. ಒಂದಿಷ್ಟು ಕಾಲೇಜುಗಳಲ್ಲಿ ಕೇಸರಿ ಶಾಲು ಹಾಕಿ ವಿದ್ಯಾರ್ಥಿಗಳು ಬಂದರೆ, ಇನ್ನೊಂದಿಷ್ಟು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುತ್ತಿದ್ದಾರೆ. ಹೀಗಾಗಿ ಕೆಲವೆಡೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಲು ಒತ್ತಾಯಿಸಿ ಬೆಳಗಾವಿಯಲ್ಲಿ ಎಂಐಎಂ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಹೌದು ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಎಂಐಎಂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು. ಇನ್ನು ಬುರ್ಖಾ ಧರಿಸಿಯೇ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹಿಜಾಬ್ ನಮ್ಮ ಹಕ್ಕು, ನಫರತ್ ಹಠಾವೋ ದೇಶ ಬಚಾವೋ. ಹಿಜಾಬ್ ಧರಿಸುವುದು ನಮ್ಮ ಹಕ್ಕು ಹಿಜಾಬ್ ಧರಿಸಿದ್ರೆ ಹೆಣ್ಣುಮಕ್ಕಳು, ಮಹಿಳೆಯರು ಸುರಕ್ಷಿತವಾಗಿ ಇರ್ತಾರೆ. ನಮ್ಮ ಹಕ್ಕನ್ನ ನಾವು ಪಡೆದೇ ತೀರುತ್ತೇವೆ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಆರ್‍ಎಸ್‍ಎಸ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.

ಎಂಐಎಂ ರಾಜ್ಯ ಕಾರ್ಯದರ್ಶಿ ಲತೀಫ್ ಖಾನ್ ಪಠಾಣ್ ಮಾತನಾಡಿ ಆರ್‍ಎಸ್‍ಎಸ್ ಕುಮ್ಮಕ್ಕಿನಿಂದ ಇದು ನಡೆಯುತ್ತಿದೆ. ನಾವು ಚಿಕ್ಕವರಿದ್ದಾಗಿನಿಂದ ನೋಡಿಕೊಂಡು ಬರುತ್ತಿದ್ದೇವೆ. ಆಯಾ ಧರ್ಮದ ಅನುಸಾರ ಸಮವಸ್ತ್ರ ಧರಿಸಿಕೊಂಡು ಬಂದು ವಿದ್ಯಾಭ್ಯಾಸ ಕಲಿಯುತ್ತಿದ್ದೇವು ಆಗ ಏನೂ ಆಗಿರಲಿಲ್ಲ, ಆದರೆ ಈಗ ಬರೀ ಉಡುಪಿ ಮತ್ತು ಕುಂದಾಪುರದಲ್ಲಿ ತಾವೇ ಇದನ್ನು ಎಬ್ಬಿಸಿ, ಸರ್ಕಾರದ ವಿಫಲತೆಯನ್ನು ಮುಚ್ಚಿ ಹಾಕಲು, 2023ರ ಚುನಾವಣೆ ಹಿನ್ನೆಲೆಯಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಯತ್ನಾಳ್ ಅವರಿಗೆ ಪಾಕಿಸ್ತಾನ ಮೇಲೆ ಬಹಳ ಪ್ರೀತಿ ಇದ್ದರೆ ಅವರು ಬೇಕಾದ್ರೆ ಅಲ್ಲಿಗೆ ಹೋಗಬಹುದು. ನಾವು ಅಂಬೇಡ್ಕರ್ ಅವರ ಸಂವಿಧಾನ ಒಪ್ಪಿ ನಾವು ಇಲ್ಲಿ ಆರಾಮವಾಗಿ ಇದ್ದೇವೆ ಎಂದು ತಿರುಗೇಟು ನೀಡಿದರು.

ನಗರ ಸೇವಕಿ ರೇμÁ್ಮ ಮಾತನಾಡಿ ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು ಇದನ್ನು ಯಾವುದೇ ಮಂತ್ರಿ, ಸರ್ಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಿಜಾಬ್‍ನ್ನು ನಮ್ಮ ಅಜ್ಜಿ, ತಾಯಿ ಮತ್ತೆ ನಾನು ಹಾಕಿಕೊಂಡಿದ್ದೇನೆ, ನಮ್ಮ ಮಕ್ಕಳು ಹಾಕಿಕೊಳ್ಳುತ್ತಾರೆ. ಸರ್ಕಾರಕ್ಕೆ ಏನಾದ್ರೂ ಮಾಡಬೇಕು ಎಂಬ ಇಚ್ಛೆ ಇದ್ದರೆ ಬಡತನ, ನಿರುದ್ಯೋಗ ಹೋಗಲಾಡಿಸುವ ಕೆಲಸ ಮಾಡಿ ಎಂದು ಆಗ್ರಹಿಸಿದರು.

ಬಳಿಕ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಧರಣಿಯಲ್ಲಿ ಎಂಐಎಂ ನಗರಸೇವಕ ಶಾಹೀದ್ ಖಾನ್ ಪಠಾಣ್ ಸೇರಿದಂತೆ ಇನ್ನಿತರ ಮುಖಂಡರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

 

Tags:

error: Content is protected !!