ಬೆಳಗಾವಿಯ ಹಿರಿಯ ಪತ್ರಕರ್ತ,ಲೇಖಕ ಶ್ರೀ ಭೀಮಸೇನ ತೊರಗಲ್ಲ ಅವರು ಇಂದು ಸೋಮವಾರ ಬೆಳಗ್ಯೆ
ನಿಧನರಾಗಿದ್ದಾರೆ.ಅವರಿಗೆ 82 ವರ್ಷವಯಸ್ಸಾಗಿತ್ತು.ದಿವಂತರು ರಾಣಿ ಚೆನ್ನಮ್ಮನಗರದ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದು ತಮ್ಮ ಹಿಂದೆ ಪತ್ನಿ,ಪುತ್ರಿ ಹಾಗೂ ಪುತ್ರನನ್ನುಬಿಟ್ಟು ಅಗಲಿದ್ದಾರೆ.

ಇಂದು ಮುಂಜಾನೆಯೇಶ ಹಾಪುರದ ರುದ್ರಭೂಮಿಯಲ್ಲಿ ಯಾವದೇ ವಿಧಿವಿಧಾನಗಳಿಲ್ಲದೇ ಅಂತ್ಯಕ್ರಿಯೆ ನೆರವೇರಿತು.ತಾವು ನಿಧನರಾದ ಎರಡು ಗಂಟೆಯೊಳಗಾಗಿ ಯಾವದೇ ಬ್ರಾಹ್ಮಣ ಸಂಪ್ರದಾಯಗಳನ್ನು ಅನುಸರಿಸದೇ ಅಂತ್ಯಕ್ರಿಯೆಯನ್ನು ನಡೆಸಬೇಕೆಂದು ಅವರು ಎರಡು ದಶಕಗಳ ಹಿಂದೆಯೇ ತಮ್ಮ ಆಪ್ತರು ಮತ್ತು ಕುಟುಂಬದವರಿಗೆ ತಿಳಿಸಿದ್ದರು. ಎಂಭತ್ತರ ದಶಕದ ಆರಂಭದಲ್ಲಿ “ಸಮತೋಲ”ಎಂಬ ಸಂಜೆ ದಿನಪತ್ರಿಕೆಯನ್ನು ಆರಂಭಿಸಿದ್ದ ತೊರಗಲ್ಲ ಅವರು ಮಹಾಭಾರತ ಮಹಾಕಾವ್ಯವನ್ನು ತಮ್ಮದೇ ದೃಷ್ಟಿಕೋನದಿಂದ ವ್ಯಾಖ್ಯಾನಿಸಿ “ಸಂಚು”ಕಾದಂಬರಿಯನ್ನು ಬರೆದಿದ್ದರು.
ಬೆಳಗಾವಿಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಬರವಣಿಗೆಯ ಮೂಲಕ ಹೆಸರು ಮಾಡಿದ್ದ ದಿವಂಗತರು
ನಾಡಿನ ಸಾರಸ್ವತ ಲೋಕದ ಗಣ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಬೆಳಗಾವಿಯ ಕನ್ನಡ,ಮರಾಠಿ
ಪತ್ರಿಕೆಗಳು ಹಳೆಯ ಕಾಲದ ಮೊಳೆ ಜೋಡಿಸಿ ಮುದ್ರಿಸುವ ಟ್ರೆಡಲ್ ಮುದ್ರಣ ಯಂತ್ರ
ಹೊಂದಿದ ಕಾಲದಲ್ಲಿಯೇ ಮೊಟ್ಟ ಮೊದಲು ಕಂಪ್ಯೂಟರ್ ಗಳನ್ನು ತಮ್ಮ ಪತ್ರಿಕಾಲಯದಲ್ಲಿ ಅಳವಡಿಸಿದ್ದರು.
ದಿ.ತೊರಗಲ್ಲ ಅವರು ತಾವು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ಯಾವಾಗಲೂ ಅಂಟಿಕೊಂಡಿದ್ದರಲ್ಲದೇ ತಮಗೆ ಪತ್ರಿಕೆಯನ್ನು ನಡೆಸುವದು ಸಾಧ್ಯವಿಲ್ಲವೆಂದು ಎನಿಸಿದಾಗ ದಿ.ಕಲ್ಯಾಣರಾವ ಮುಚಳಂಬಿ ಅವರಿಗೆ
ಹಸ್ತಾಂತರಿಸಿದ್ದರು.