ಬೆಳಗಾವಿಯ ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಲು ಆಗ್ರಹಿಸಿ ಅಹೋರಾತ್ರಿ ಧರಣಿ ಮುಂದುವರಿದಿದೆ. ಎಪಿಎಂಸಿ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಸಿಡಿದೆದ್ದಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಬೆಳಗಾವಿ ಎಪಿಎಂಸಿ ಕಚೇರಿ ಆವರಣದಲ್ಲಿ ನಿನ್ನೆ ಗುರುವಾರದಿಂದ ಭಾರತೀಯ ಕೃಷಿ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದ್ದು. ಇನ್ನು ರೈತ ಮುಖಂಡರ ಪ್ರತಿಭಟನೆಗೆ ಕೆಲ ವ್ಯಾಪಾರಸ್ಥರು ಕೂಡ ಸಾಥ್ ಕೊಟ್ಟಿದ್ದಾರೆ. ಇನ್ನು ನಿನ್ನೆ ರಾತ್ರಿ ಎಪಿಎಂಸಿ ನಿರ್ದೇಶಕ ಕರಿಗೌಡ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಓರ್ವ ಮಹಿಳೆ ಕೂಡ ಕರಿಗೌಡ ವಿರುದ್ಧ ಹರಿಹಾಯ್ದಿದ್ದರು. ಇನ್ನು ಎಪಿಎಂಸಿ ಸದಸ್ಯರು ಹಾಗೂ ವ್ಯಾಪಾರಸ್ಥರು ಕೂಡ ಎಪಿಎಂಸಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ಇನ್ನು ಗುರುವಾರ ಪೂರ್ತಿ ಅಹೋರಾತ್ರಿ ಧರಣಿ ಮಾಡಿದ್ದ ಪ್ರತಿಭಟನಾಕಾರರು ಶುಕ್ರವಾರವೂ ತಮ್ಮ ಧರಣಿ ಮುಂದುವರಿಸಿದರು. ಬೆಳಗಾವಿ ಗಾಂಧಿ ನಗರದಲ್ಲಿ ಆರಂಭ ಆಗಿರುವ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯಿಂದ ಸರ್ಕಾರಿ ಎಪಿಎಂಸಿ ಮಾರುಕಟ್ಟೆಗೆ ಹೊಡೆತ ಬೀಳಲಿದೆ. ಮೊದಲೇ ನಷ್ಟದಲ್ಲಿ ಇರುವ ಎಪಿಎಂಸಿ ಮಾರುಕಟ್ಟೆ ವ್ಯಾಪಾರಸ್ಥರು, ಲಕ್ಷಾಂತರ ರುಪಾಯಿ ಸಾಲಮಾಡಿ ಮಳಿಗೆ ಖರೀದಿಸಿದ್ದಾರೆ. ಹೀಗಾಗಿ ಖಾಸಗಿ ಮಾರುಕಟ್ಟೆ ಬಂದ್ ಮಾಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದ್ದಾರೆ. ಈ ವೇಳೆ ಮಾತನಾಡಿದ ವ್ಯಾಪಾರಿ ಸತೀಶ ಪಾಟೀಲ್ ಮಾತನಾಡಿ ನಾವು ಸ್ವಂತ ಮನಿ ಪ್ಲಾಟ್ ಮಾರಿ, ಬಂಗಾರ ಒತ್ತೆ ಇಟ್ಟು ರೊಕ್ಕ ಕೂಡಿಸಿ ಸರ್ಕಾರಿ ಎಪಿಎಂಸಿಯಲ್ಲಿ ಮಳಿಗೆಗಳನ್ನು ಪಡೆದುಕೊಂಡಿದ್ದೇವೆ. ಮೊದಲೇ ಕೋವಿಡ್ನಿಂದ ವ್ಯಾಪಾರ ಇಲ್ಲದೇ ಸಂಕಷ್ಟದಲ್ಲಿದ್ದೇವೆ. ತಕ್ಷಣವೇ ಸಚಿವ ಎಸ್.ಟಿ.ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಖಾಸಗಿ ಭಾಜಿ ಮಾರ್ಕೆಟ್ ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಬಳಿಕ ರೈತ ಮುಖಂಡ ಸಿದಗೌಡ ಮೊದಗಿ ಮಾತನಾಡಿ ರೈತರು ಮತ್ತು ವರ್ತಕರ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಖಾಸಗಿ ಮಾರುಕಟ್ಟೆಯಿಂದ ಶೋಷಣೆ ಆಗುತ್ತದೆ. ಇದರಿಂದ ರೈತರಿಗೆ ಯಾವುದೇ ರೀತಿ ಉಪಯೋಗ ಆಗುವುದಿಲ್ಲ. ಇನ್ನು ನಾವು ಇಷ್ಟು ಹೋರಾಟ ಮಾಡುತ್ತಿದ್ದರೂ ಕೂಡ ಜಿಲ್ಲಾಧಿಕಾರಿಗಳು ಈ ಬಗ್ಗೆ ತುಟಿ ಪಿಟಕ್ ಎನ್ನುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಖಾಸಗಿ ಎಪಿಎಂಸಿ ಭಾಜಿ ಮಾರ್ಕೆಟ್ ರದ್ದತಿಗೆ ಆಗ್ರಹಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿರುವ ರೈತರು ಮತ್ತು ವ್ಯಾಪಾರಿಗಳಿಗೆ ನ್ಯಾಯ ಸಿಗುತ್ತಾ..? ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.