ಇಂದಿನಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಿದ್ದು. ರಾಜ್ಯಪಾಲರ ಭಾಷಣದ ಬಳಿಕ ಇತ್ತಿಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ರಾಜ್ಯಪಾಲರ ಭಾಷಣದ ಬಳಿಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕನಾಗಿ ಮಂಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ನೇಮಕ ಮಾಡಿರುವ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದ ಗಮನಕ್ಕೆ ತಂದರು. ಬಳಿಕ ಇತ್ತಿಚೆಗೆ ಅಗಲಿದ ರಾಜ್ಯದ ಮಾಜಿ ಸಚಿವ ಡಾ.ಕೆ.ಅಲೆಕ್ಸಾಂಡರ್, ವಿಧಾನಸಭೆ ಮಾಜಿ ಸದಸ್ಯ ಎಂ.ಎಂ.ಸಜ್ಜನ್, ಲೋಕಸಭೆ ಮಾಜಿ ಸದಸ್ಯ ಎಚ್.ಬಿ.ಪಾಟೀಲ್, ಭಾರತರತ್ನ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಹಿರಿಯ ಸಾಹಿತಿ ಡಾ.ಚಂದ್ರಶೇಖರ್ ಪಾಟೀಲ್, ಖ್ಯಾತ ಪ್ರವನಚಕಾರ ಇಬ್ರಾಹಿಂ ಸುತಾರ್, ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಈ ಮಹಾನ್ ವ್ಯಕ್ತಿಗಳನ್ನು ಕಳೆದುಕೊಂಡು ಈ ದೇಶ ಮತ್ತು ನಾಡು ಬಡವಾಗಿದೆ. ಡಾ.ಜೆ.ಅಲೆಕ್ಸಾಂಡರ್ ಓರ್ವ ಅಪರೂಪದ ಅಧಿಕಾರಿ. ಇವರು ಯಾವುದೇ ಹುದ್ದೆಯಲ್ಲಿ ಇದ್ದರೂ ಕೂಡ ತಾವಿರುವ ಹುದ್ದೆಯ ಅಧಿಕಾರಕ್ಕಿಂತ ಜನರಿಗೆ ಯಾವ ರೀತಿ ಸಹಾಯ ಮಾಡುವುದು ಎಂದು ಚಿಂತಿಸುತ್ತಿದ್ದರು. ಬೆಳಗಾವಿಯಲ್ಲಿ ಪ್ರಾದೇಶಿಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಎಲ್ಲಿಯೇ ಕೆಲಸ ಮಾಡಿದ್ದರೂ ಅಲ್ಲಿಯವರೇ ಆಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿಕೊಂಡರು. ಇನ್ನು ಎಂ.ಎಂ.ಸಜ್ಜನ್ ಅವರು ಹೆಸರಿಗೆ ತಕ್ಕಂತೆ ಸಜ್ಜನರಾಗಿ ಇದ್ದವರು ಎಂದು ನೆನಪಿಸಿಕೊಂಡರು. ಇನ್ನು ಎಚ್.ಬಿ.ಪಾಟೀಲ್ ಕೂಡ ಸಜ್ಜನ ರಾಜಕಾರಣಿ, ಒಂದು ಬಾರಿ ಲೋಕಸಭೆ ಸದಸ್ಯರಾಗಿದ್ದರು. ಸಹಕಾರ ರಂಗ, ಔದ್ಯೋಮಿಕ ವಲಯದಲ್ಲಿ ದೊಡ್ಡ ಮಟ್ಟದ ಸೇವೆ ಸಲ್ಲಿಸಿದ್ದರು. ಇನ್ನು ದೇವರ ಅದ್ಭುತವಾದ ಸೃಷ್ಟಿಯಲ್ಲಿ ಲತಾ ಮಂಗೇಶ್ಕರ್ ಅವರು ಕೂಡ ಒಬ್ಬರು. ಅವರ ಒಂದು ಗುಣ ಶುಭ್ರತೆಯಿಂದ ಕೂಡಿತ್ತು. ಆ ಶುಭ್ರತೆ ಇರೋದರಿಂದಲೇ ಯಾವುದೇ ಶಬ್ದಗಳನ್ನು ಕೊಟ್ಟರೂ ಆ ಭಾವನೆಗಳನ್ನು ತುಂಬುವ ಶಕ್ತಿ ಅವರಿಗಿತ್ತು. ಧ್ವನಿಯ ಜೊತೆಗೆ ಸದಾಕಾಲ ಸೆಳೆಯುವ ಗುಣ ಅಪರೂಪ. ಹೃದಯಕ್ಕೆ ಮುಟ್ಟುವ ರೀತಿಯಲ್ಲಿ ಅವರ ಹಾಡುಗಾರಿಕೆ ಇತ್ತು. ಇದೊಂದು ಪೆಟೆಂಟ್ ಆ ದೇವರಿಗೆ ಮಾತ್ರವಿದೆ. ಇನ್ನೊಬ್ಬ ಲತಾ ಮಂಗೇಶ್ಕರ್ ಹುಟ್ಟುವುದು ಕಷ್ಟಸಾಧ್ಯ ಎಂದರು. ಇನ್ನು ಚಂದ್ರಶೇಖರ್ ಪಾಟೀಲ್ ನಮ್ಮೂರಿನವರು, ಸವಣೂರ ತಾಲೂಕಿನವರು. ಬಹುಕಾಲ ಧಾರವಾಡದಲ್ಲಿ ಜೀವನ ಸಲ್ಲಿಸಿದ್ದಾರೆ. ಅವರ ಕನ್ನಡದ ಸಾಹಿತ್ಯ ರಚನೆ ವಿಭಿನ್ನವಾಗಿತ್ತು. ಬಂಡಾಯ ಚಿಂತನೆ ಇತ್ತು, ನಮ್ಮ ತಂದೆಯವರ ಜೊತೆಗೆ ಸಾಕಷ್ಟು ಒಡನಾಟ ಹೊಂದಿದ್ದರು. ಇದ್ದದ್ದನ್ನು ಇದ್ದನ್ನು, ತೀಕ್ಷ್ಣವಾಗಿ ಹೇಳುವ ಕ್ರಾಂತಿಕಾರಿ ಗುಣ ಹೊಂದಿದ್ದರು. ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ ಎಂದರು ಸ್ಮರಿಸಿಕೊಂಡರು. ಅದೇ ರೀತಿ ಖ್ಯಾತ ಪ್ರವನಚಕಾರ ಇಬ್ರಾಹಿಂ ಸುತಾರ್, ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರನ್ನು ನೆನಪಿಸಿಕೊಂಡರು.
ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ಧಾರವಾಡದಲ್ಲಿ ಹೈಕೋರ್ಟ ಪೀಠ ಸ್ಥಾಪನೆಯಲ್ಲಿ ಎಂ.ಎಂ.ಸಜ್ಜನ್ ಬಹಳ ಮಹತ್ವದ ಪಾತ್ರ ವಹಿಸಿದ್ದರು. ಹೆಸರಿಗೆ ತಕ್ಕ ಹಾಗೆ ವ್ಯಕ್ತಿಗತವಾಗಿ ಸಜ್ಜನರಾಗಿಯೇ ಇದ್ದರು ಎಂದು ಸ್ಮರಿಸಿಕೊಂಡರು. ಇನ್ನು ಹಿರಿಯ ಸಾಹಿತಿ ಜನಪರ ವ್ಯಕ್ತಿ, ಬಂಡಾಯ ಸಾಹಿತಿ ಡಾ.ಚಂದ್ರಶೇಖರ್ ಪಾಟೀಲ್ ನಮ್ಮನ್ನು ಅಗಲಿದ್ದಾರೆ. ಇನ್ನು ಕನ್ನಡದ ಸೂಫಿ ಸಂತ, ಕನ್ನಡದ ಕಬೀರ ಇಬ್ರಾಹಿಂ ಸುತಾರ್ ಅವರು ಕೇರಳ, ಮಹಾರಾಷ್ಟ್ರದಲ್ಲಿ ಪ್ರವಚನ ನೀಡಿದ್ದರು. ತಮ್ಮ ಪ್ರವಚನಗಳ ಮೂಲಕ ಸಮನ್ವಯತೆ, ಸೌಹರ್ದತೆ ವಾತಾವರಣ ಸೃಷ್ಟಿಸಿದ್ದರು. ಅದೇ ರೀತಿ ನ್ಯಾ.ಕೆ.ಎಲ್.ಮಂಜುನಾಥ್ ಅವರು ಉಚ್ಛ ನ್ಯಾಯಾಲಯದಲ್ಲಿ ಸುಮಾರು 10 ಸಾವಿರ ತೀರ್ಪು ಕೊಡುವ ಮೂಲಕ ದೊಡ್ಡ ಸಾಧನೆ ಮಾಡಿದ್ದರು ಎಂದು ಸ್ಮರಿಸಿಕೊಂಡರು.
ಅದೇ ರೀತಿ ಇನ್ನು ಹಲವರು ಸಂತಾಪ ಸೂಚನೆ ಚರ್ಚೆಯಲ್ಲಿ ಭಾಗಿಯಾಗಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.