ಮೇಕೆದಾಟು ಯೋಜನೆ ಬೇಕು. ಆದರೆ ಅಣೆಕಟ್ಟು ನಿರ್ಮಿಸುವುದು ಬೇಡ ಎಂದು ನರ್ಮದಾ ಬಚಾವ್ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಕರ್ನಾಟಕ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

ಕರ್ನಾಟಕ ನೆಲ ಜಲ ರಕ್ಷಣಾ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮೇಕೆದಾಟು ಪರ, ಅಣೆಕಟ್ಟು ವಿರುದ್ಧ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮೇಧಾ ಪಾಟ್ಕರ್ ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ 1200 ಹೆಕ್ಟೇರ್ ಅರಣ್ಯ ಭೂಮಿಯೊಂದಿಗೆ ಆ ಭಾಗದಲ್ಲಿ ವಾಸಿಸುವ ಪ್ರಾಣಿ ಸಂಕುಲವೂ ನಾಶವಾಗಲಿದೆ. ಕಾಡು ನಾಶವಾದರೆ ಸಾವಿರಾರು ಜನರ ಬದುಕಿಗೆ ಗಂಡಾಂತರ ಒದಗಲಿದೆ. ಪರಿಸರದ ಮೇಲೆಯೂ ಇವೆಲ್ಲವೂ ಪರಿಣಾಮ ಬೀರಲಿದೆ. ಅಣೆಕಟ್ಟು ಕಟ್ಟುವ ಬದಲು ಕೆರೆ, ಕುಂಟೆಗಳನ್ನು ಸಂರಕ್ಷಿಸಿ, ಜೀವಜಲ ಉಳಿಸಿಕೊಳ್ಳಬೇಕು ಎಂದರು.
ಮೇಕೆದಾಟು ನಮಗೆ ಬೇಕು ಎಂದಾದರೆ ಅಣೆಕಟ್ಟು ಎನ್ನಬೇಕು. ಅಲ್ಲಿ ಅಣೆಕಟ್ಟು ಕಟ್ಟುವುದರಿಂದ ಸುಮಾರು 1200 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗುತ್ತೆ. ಲಕ್ಷಾಂತರ ಮರಗಳು ಹಾಳುಗೆಡವುವ ಇಂಥ ಯೋಜನೆ ನಮಗೆ ಬೇಕಿಲ್ಲ. ನಾವೆಲ್ಲರೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ವಿರೋಧಿಸಬೇಕು. ಅಣೆಕಟ್ಟು ನಿರ್ಮಿಸುವುದರಿಂದ ಕೆಲ ರಾಜಕಾರಿಣಿಗಳಿಗೆ, ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ಜನರಿಗೆ ಇದರಿಂದ ಯಾವ ಅನುಕೂಲವೂ ಇಲ್ಲ. ಉತ್ತಮ ಪರಿಸರ ಉಳಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದರು.
ಅಣೆಕಟ್ಟೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಚೇತನ್ ಅವರ ಪ್ರಯತ್ನಕ್ಕೆ ಮೇಧಾ ಪಾಟ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ಹೋರಾಟ ಮಾಡಿ ಪರಿಸರ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಈ ಹೋರಾಟದಲ್ಲಿ ದಲಿತ, ಬುಡಕಟ್ಟು ಜನರು ಭಾಗವಹಿಸುತ್ತಿರುವುದು ಸಂತೋಷದ ವಿಷಯ. ನಾವು ಆದಿವಾಸಿಗಳನ್ನು ಉಳಿಸಬೇಕಾಗಿದೆ. ನಾವೆಲ್ಲರೂ ಸೇರಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಬೇಕಿದೆ. ಅಣೆಕಟ್ಟು ಕಟ್ಟುವುದರಿಂದ ಯಾರಿಗೆ ಅನುಕೂಲ ಎಂದು ಪ್ರಶ್ನಿಸಿದ ಅವರು, ಅಣೆಕಟ್ಟು ನಿರ್ಮಾಣದಿಂದ ಕೆಲ ರಾಜಕಾರಿಣಿಗಳಿಗೆ ಗುತ್ತಿಗೆದಾರರಿಗೆ ಅನುಕೂಲವಾಗಬಹುದು. ಸಾಮಾನ್ಯ ಜನರಿಗೆ ಏನೂ ಪ್ರಯೋಜನವಿಲ್ಲ. ಅದೇ ಉತ್ತಮ ಪರಿಸರ ಉಳಿದ್ರೆ, ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ಅಣೆಕಟ್ಟು ನಿರ್ಮಾಣವಾದರೆ ಪರಿಸರಕ್ಕೆ ಹಾನಿಯಾಗುತ್ತದೆ. ಕಾಡು ನಾಶವಾದರೆ ವಾತಾವರಣ ಮತ್ತಷ್ಟು ಹದಗೆಡುತ್ತದೆ ಎಂದು ಸರ್ಕಾರಕ್ಕೆ ಮೇಧಾ ಪಾಟ್ಕರ್ ಎಚ್ಚರಿಕೆ ನೀಡಿದರು.
ಮೇಕೆದಾಟು ಅಣೆಕಟ್ಟು ಯೋಜನೆಯ ವಿಸ್ತøತ ಯೋಜನಾ ವರದಿ ನಾನಿನ್ನೂ ನೋಡಿಲ್ಲ. ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಪಾದಯಾತ್ರೆ ಮಾಡುತ್ತಿದೆ. ಮಹಾತ್ಮಗಾಂಧಿ ಏನು ಹೇಳಿದ್ದಾರೆ ಎನ್ನುವುದು ಈಗಿನ ಕಾಂಗ್ರೆಸಿಗರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದ ಮೇಧಾ ಪಾಟ್ಕರ್ ಬಿಜೆಪಿ ನಾಯಕರು ಪ್ರಸ್ತುತ ಗಾಂಧಿ ಮಾದರಿಯನ್ನು ಅನುಸರಿಸುತ್ತಿಲ್ಲ. ಅವರು ನರೇಂದ್ರ ಮೋದಿ ಮಾದರಿಯನ್ನು ಅನುಸರಿಸುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂಥ ಯೋಜನೆಗಳನ್ನು ಜಾರಿಗೊಳಿಸಲು ಮೋದಿ ಮತ್ತು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಆದರೆ ಯೋಜನೆ ಬೇಕೆ..? ಬೇಡವೇ ಎಂದು ನಿರ್ಧರಿಸುವುದು ಜನರ ಹಕ್ಕು. ಪರಿಸರಕ್ಕೆ ಹಾನಿಯುಂಟು ಮಾಡುವ ಯೋಜನೆಯನ್ನು ಜನರು ಬೇಡ ಎನ್ನಬೇಕು ಎಂದು ಮೇಧಾ ಪಾಟ್ಕರ್ ಹೇಳಿದರು.
ಒಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತದೆ ಎಂದು ಕಾದು ನೋಡಬೇಕಿದೆ.