ಖ್ಯಾತ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಗಟ್ಟಿಯಾದ ಹಾಗೂ ದಿಟ್ಟ ನಿಲುವಿನ ಸಾಹಿತಿ ಮತ್ತು ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ ಎಂದು ಬೆಳಗಾವಿಯ ಹಿರಿಯ ರಂಗಕರ್ಮಿ, ಸಾಹಿತಿ ಬಿ.ಎಸ್.ಗವಿಮಠ ಸಂತಾಪ ಸೂಚಿಸಿದರು.

ಮಂಗಳವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ಚಂಪಾ ಮತ್ತು ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಗಲಿದ ಇಬ್ಬರೂ ಗಣ್ಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಸ್.ಗವಿಮಠ ಸಾಹಿತಿ ಚಂಪಾ ಅವರೊಂದಿಗೆ ನಾಡಿನ ಸಾಹಿತಿಗಳು ಅನೇಕ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಸಹಿತ ಚಂಪಾ ಅವರ ಕನ್ನಡ ನಾಡು, ನುಡಿ ಹಾಗೂ ಗಡಿಯ ಬಗ್ಗೆ ಹೊಂದಿದ್ದ ಬದ್ಧತೆಯನ್ನು ಮೆಚ್ಚಿದ್ದರು. ನಾಡು ನುಡಿ ಗಡಿಯ ಪ್ರಶ್ನೆ ಬಂದಾಗ ಸಾಹಿತಿಗಳು ಹೋರಾಟಕ್ಕೆ ಮುಂದಾಗದಿರುವದು ವಿμÁದಕರ ಸಂಗತಿಯಾಗಿದೆ ಎಂದರು.
ನಂತರ ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಮಾತನಾಡಿ ಚಂಪಾ ಅವರ ವಿಡಂಬಣೆ, ಮೊನಚು ಅವರ ಸಾಹಿತ್ಯ ಕೃತಿಗಳಲ್ಲಿ ಎದ್ದು ಕಾಣುತ್ತಿದ್ದವು. ಇನ್ನು ಜಾನಪದ ಗಾಯಕ ಬಸವಲಿಂಗಯ್ಯ ಅವರು ಜಾನಪದ ಲೋಕಕ್ಕೆ ನೀಡಿದ ಸೇವೆಯನ್ನು ಸ್ಮರಿಸಿಕೊಂಡರು.
ಬಳಿಕ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಮಾತನಾಡಿ 1979ರಲ್ಲಿ ಬಂಡಾಯ ಸಾಹಿತ್ಯ ಜನ್ಮ ತಾಳಿದ ದಿನದಿಂದಲೂ ತಮ್ಮ ಮತ್ತು ಚಂಪಾ ಒಡನಾಟದ ಬಗ್ಗೆ ವಿವರಿಸಿದರಲ್ಲದೇ ಕಳೆದ ವರ್ಷದ ಸಪ್ಟೆಂಬರ್ 3ರಂದು ಬೆಂಗಳೂರಿನಲ್ಲಿ ಅವರು ಹಾಸಿಗೆ ಹಿಡಿದು ಮಲಗಿದ್ದನ್ನು ಕಂಡು ತಮಗೆ ಕರಳೇ ಕಿತ್ತು ಬಂದಂತಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿಯ ಬಗ್ಗೆ ವರದಿ ಸಲ್ಲಿಸಲು ತಮ್ಮ ಅಧ್ಯಕ್ಷತೆಯಲ್ಲಿ “ಚಂದರಗಿ ಸಮಿತಿ”ನೇಮಿಸಿ ವರದಿ ಪಡೆದು ಅದರ ಅನುμÁ್ಠನದಲ್ಲಿ ಚಂಪಾ ಯಶಸ್ವಿಯಾದರು.
ವರದಿ ಸಲ್ಲಿಸಿದಾಗ ಬೆಳಗಾವಿ ತಾಲೂಕಿನ 28 ಮರಾಠಿ ಪ್ರಾಬಲ್ಯದ ಗ್ರಾಮಗಳಲ್ಲಿ ಕನ್ನಡ ಶಾಲೆಗಳೇ ಇರಲಿಲ್ಲ.ಮುಂದಿನ ಒಂದೆರಡು ವರ್ಷಗಳಲ್ಲಿ ಈ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ಆರಂಭಗೊಂಡವು ಎಂದು ಸ್ಮರಿಸಿಕೊಂಡರು.
ಈ ವೇಳೆ ಸಾಹಿತಿಗಳಾದ ಯ.ರು.ಪಾಟೀಲ, ರಮಾನಾಥ ಬನಶಂಕರಿ, ಸಿದ್ರಾಮ ತಳವಾರ, ಪಿ.ಜಿ.ಕೆಂಪನ್ನವರ, ಬಸವರಾಜ ಸುಣಗಾರ, ಡಾ.ಎಚ್.ಬಿ.ರಾಜಶೇಖರ, ಬಸವರಾಜ ಸುಣಗಾರ ಸೇರಿ ಇನ್ನಿತರರು ಉಪಸ್ಥಿತರಿದ್ದರು.