ಕಾರ್ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿ, ಕುಟುಂಬದ ಇನ್ನು ಮೂವರಿಗೆ ಗಂಭೀರ ಗಾಯವಾಗಿರುವ ಧಾರುಣ ಘಟನೆ ನಿಪ್ಪಾಣಿ ತಾಲೂಕಿನ ಸೌಂದಲಗಾ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಭವಿಸಿದೆ.
ಹೌದು ರವಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಸಾಂಗಲಿಯಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಕಾರ್ನಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೌಂದಲಗಾದ ಕಲಾಂತ್ರೆ ಮಾಲ್ ಬಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಮೃತರು ಸಾಂಗಲಿ ಜಿಲ್ಲೆಯ ಬಿಸ್ತೂರ್ನ ಲತಾ ರಾಜೇಂದ್ರ ಪಾಟೀಲ್(40), ಅನಿಶಾ ರಾಜೇಂದ್ರ ಪಾಟೀಲ್(17) ಎಂದು ಗುರುತಿಸಲಾಗಿದೆ. ಗಾಯಾಳುಗಳು ಅಥರ್ವ ರಾಜೇಂದ್ರ ಪಾಟೀಲ್(14), ಸುಮಿತ್ ರಾಜೇಂದ್ರ ಪಾಟೀಲ್(19), ರಾಜೇಂದ್ರ ಶಿವಾಜಿ ಪಾಟೀಲ್(44) ಎಂದು ಗುರುತಿಸಲಾಗಿದೆ.
ಮೃತರು ಹಾಗೂ ಗಾಯಾಳುಗಳು ಎಲ್ಲರೂ ಒಂದೇ ಕುಟುಂಬದವರಾಗಿದ್ದು. ಗಾಯಾಳು ರಾಜೇಂದ್ರ ಶಿವಾಜಿ ಪಾಟೀಲ್ ಪತ್ನಿ, ಓರ್ವ ಮಗಳು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳಿಗೆ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಥಳಕ್ಕೆ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.