ಕಾಣೆಯಾಗಿದ್ದ ಎರಡು ವರ್ಷದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೀಠ ಗ್ರಾಮದಲ್ಲಿ ನಡೆದಿದೆ.

ವಿಕ್ರಾಂತ್ ಸೋಮಪ್ಪ ಪೂಜಾರ (2) ಮೃತ ದುರ್ದೈವಿ. ಸೋಮವಾರ ಮಧ್ಯಾಹ್ನ ಬಾಲಕ ಆಟ ಆಡುತ್ತ ಹೋಗಿ ಬಾವಿಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಧ್ಯಾಹ್ನ ತಂದೆ ಸೋಮಪ್ಪ ಪೂಜಾರ್ ಜೊತೆ ಬಾಲಕ ಊಟ ಮಾಡಿದ್ದ. ತಂದೆ ಕೆಲಸಕ್ಕೆ ಹೋದ ನಂತರ ಬಾಲಕ ಆಟ ಆಡುತ್ತ ಹೊರಗೆ ಹೋಗಿದ್ದಾನೆ. ಬಾಲಕ ಕಾಣದಿದ್ದಾಗ ಕುಟುಂಬಸ್ಥರು ಎಲ್ಲ ಕಡೆ ಹುಡುಕಾಡಿದ್ದಾರೆ. ಸುಳಿವು ಸಿಗದ ಕಾರಣ ಪೆÇೀಷಕರು ಕಟಕೋಳ ಪೊಲೀಸ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಈ ವೇಳೆ ಬಾಲಕನ ತಾಯಿ ಗೌರಮ್ಮ ಮಾತನಾಡಿ, ಸೋಮವಾರ ಮಧ್ಯಾಹ್ನ ಊಟ ಮಾಡಿ ಹೊರಗೆ ಆಟವಾಡಲು ತೆರಳಿದ್ದ. ದಿನವೂ ಆಡುತ್ತಾನೆ ಹಾಗೆ ವಾಪಸ್ ಬರುತ್ತಾನೆ ಎಂದುಕೊಂಡು ಕಾದರೂ ವಾಪಸ್ ಬರಲಿಲ್ಲ. ಎಲ್ಲ ಕಡೆ ಹುಡುಕಾಡಿದೆವು. ಪೊಲೀಸರಿಗೂ ದೂರು ನೀಡಿದೆವು ಎಂದು ದು:ಖಿಸಿದರು.
ಬಾವಿಯಲ್ಲಿ ಮಂಗಳವಾರ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಶವ ಹೊರ ತೆಗೆದರು.
ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಟಕೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.