ಕಾಗವಾಡ ತಾಲೂಕಿನ ಪಂಚಾಮಸಾಲಿ ಲಿಂಗಾಯತ ಸಮಾಜ ಕಾರ್ಯಕರ್ತರಿಂದ ಹಿಂದೂಳಿದ 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಲು ಕಾಗವಾಡ ಗ್ರೇಡ್-2 ತಹಶೀಲ್ದಾರ ಅಣ್ಣಾಸಾಹೇಬ ಕೋರೆ ಇವರಿಗೆ ಮನವಿ ಅರ್ಪಿಸಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಕರ್ನಾಟಕ ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜವು ಸಮುದಾಯದಲ್ಲಿ ಬಹುಸಂಖ್ಯಾತ ಸಮಾಜವಾಗಿದೆ. ಈ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದೂಳಿದ ಸಮಾಜವಾಗಿದೆ. ಈ ಸಮಾಜದ ಮೂಲ ಕುಲ ಕಸುಬು ಕೃಷಿ ಹಾಗೂ ಕೃಷಿ ಆಧಾರಿತ ಕೂಲಿಯನ್ನು ಅವಲಂಬಿಸಿ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಈ ಸಮಾಜವನ್ನು 3ಬಿ ದಿಂದ 2ಎ ಗೆ ವರ್ಗಾಯಿಸಿರಿ. ಈ ಬೇಡಿಕೆಗಾಗಿ ಸ್ವಾಮಿಜಿಗಳು ಪಾದಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ಬೆಂಬಲ ಸೂಚಿಸಲು ನಾವು ಈ ಪ್ರತಿಭಟಣೆ ಕೈಗೊಂಡಿದ್ದೇವೆಯೆಂದು ಪಂಚಮಸಾಲಿ ಲಿಂಗಾಯತ ಸಮಾಜದ ಮುಖಂಡರು ಹಾಗೂ ಕನ್ನಡ ಯುವಕ ಸಂಘದ ಅಧ್ಯಕ್ಷ ಡಾ. ಸಿದ್ದಗೌಡ ಕಾಗೆ ಹೇಳಿದರು.
ನ್ಯಾಯವಾದಿಗಳಾದ ರಾಹುಲ್ ಕಟಿಗೇರಿ ಇವರು ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ ಇವರಿಗೆ ತಮ್ಮ ಬೇಡಿಕೆಗಳನ್ನು ಹೇಳಿ, ಸಾಮಾಜಿಕ ನ್ಯಾಯಪರತೆ ದೃಷ್ಟಿಯಿಂದ ಸಮಾಜದ ಶೈಕ್ಷಣೀಕ ಅಭಿವೃದ್ಧಿಗಾಗಿ ಸಂವಿಧಾನ ಪ್ರದತ್ತವಾದ ಅನುಚ್ಚೀದ 15(4) ರಲ್ಲಿ ಬರುವ ಶೈಕ್ಷಣಿಕ ಮೀಸಲಾತಿ ಹಾಗೂ ಸರಕಾರದ ನೇಮಕಾತಿ ಪ್ರಕ್ರೀಯಲ್ಲಿನ ಸಂವಿಧಾನ ಪ್ರದತ್ತವಾದ ಅನುಚ್ಛಿದ 16(4) ರ ಅಡಿಯಲ್ಲಿ ಔದ್ಯೋಗಿಕ ನೇಮಕಾತಿಯ ಮೀಸಲಾತಿಯನ್ನು ಪಂಚಮಸಾಲಿ ಸಮಾಜಕ್ಕೆ ನೀಡಲು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದ್ದು, ಇದನ್ನು ಮುಖ್ಯಮಂತ್ರಿಗಳು ಚಲಾಯಿಸಬೇಕೆಂದರು.
ಪ್ರತಿಭಟನಾ ರ್ಯಾಲಿಯಲ್ಲಿ ಹಿರಿಯ ಮುಖಂಡರಾದ ಸಿದ್ದಗೌಡ ಪಾಟೀಲ, ವಿದ್ಯಾವರ್ಧಕ ಶಿಕ್ಷಣ ಸಮೀತಿಯ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ನ್ಯಾಯವಾದಿ ಕಾಕಾ ಪಾಟೀಲ, ರಮೇಶ ಚೌಗುಲೆ, ಶಶೀಕಾಂತ ಗುಮಟೆ, ಚೇತನ ಪಾಟೀಲ, ಪ್ರಕಾಶ ಪಾಟೀಲ, ಶಿವಾನಂದ ನವಿನಾಳೆ, ಉಮೇಶ ಪಾಟೀಲ, ಸಚೀನ ಚೌಗುಲೆ, ಶಿವಾನಂದ ಚೌಗುಲೆ, ಅಕ್ಷಯ ಕೋರೆ, ಸೇರಿದಂತೆ ಅನೇಕರು ಇದ್ದರು.