ಕಬ್ಬಿಣದ ಆದಿರು ಗಣಿ ಕಂಪನಿಗಳಿಂದ ದಂಡದ ರೂಪದಲ್ಲಿ ಕಳೆದ ಆರು ವರ್ಷಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ನಿಧಿಯನ್ನು ಇಲಾಖೆ ಸುಪರ್ದಿಗೆ ಪಡೆಯಲು ಕಾನೂನಿನ ನೆರವು ನೀಡಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಅವರು, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಖುದ್ದು ಭೇಟಿ ಮಾಡಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಮಾತುಕತೆ ನಡೆಸಿದರು. ಸಭೆಯಲ್ಲಿ ಸಂಗ್ರಹಿಸಿದ ನಿಧಿಯ ವಿಷಯವನ್ನು ಪ್ರಸ್ತಾಪ ಮಾಡಿದರು.
ಕಬ್ಬಿಣದ ಅದಿರು ಗಣಿಗಳಿಂದ ದಂಡ ಮತ್ತು ಲೆವಿ ರೂಪದಲ್ಲಿ ಸುಮಾರು, 18,000 ಕೋಟಿ ರೂ. ಮೊತ್ತವನ್ನು ಕಳೆದ ಆರು ವರ್ಷಗಳಲ್ಲಿ ಸಂಗ್ರಹಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದಂಡವನ್ನು ಸಂಗ್ರಹಿಸಲಾಗಿದೆ. ಸಂಗ್ರಹವಾದ ನಿಧಿಯನ್ನು ಇಲಾಖೆಗೆ ಪಡೆಯಲು ಕಾನೂನು ನೆರವು ನೀಡುವಂತೆ ಕೋರಿದರು.
ಇದೇ ವೇಳೆ ಸಚಿವ ನಿರಾಣಿ ಅವರು,ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರುಗಳಿಗೆ ಪುನರ್ವಸತಿ ಕಲ್ಪಿಸಲು – ಸಿಇಪಿಎಂಐಜಡ್ ಅನುμÁ್ಠನ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ವಿಶೇಷ ಕೈಗಾರಿಕೆ ವಲಯ ದೀರ್ಘಾವಧಿಯ ಬೇಡಿಕೆಯಾಗಿದ್ದು, ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಂಡರೆ, ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಜೋಶಿ ಅವರಿಗೆ ಸಚಿವ ನಿರಾಣಿ ಮನವರಿಕೆ ಮಾಡಿಕೊಟ್ಟರು.
ಸಕಾರಾತ್ಮಕವಾಗಿ ಸ್ಪಂಧಿಸಿದ ಸಚಿವ ಪ್ರಹ್ಲಾದ್ ಜೋಶಿ, ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗಾಗಿ ದೆಹಲಿಗೆ ಬರುವಂತೆ ನಿರಾಣಿ ಅವರಿಗೆ ಸಲಹೆ ನೀಡಿದರು.