Uncategorized

ಆಳುವವರ ಕನ್ನಡಾಭಿಮಾನ, ನಾಡಪ್ರೇಮ ಪ್ರಶ್ನಾರ್ಹ..ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ

Share

ಬೆಳಗಾವಿಯಲ್ಲಿ ಕನ್ನಡ ಧ್ವಜ ಸ್ಥಾಪಿಸಿದ ನಂತರದ ಘಟನೆಗಳನ್ನು ಸರ್ಕಾರ ಕೂಡಲೇ ಪರಿಶೀಲಿಸಬೇಕು. ಇದರಲ್ಲಿ ಉದ್ಧಟತನ ತೋರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಕರ್ನಾಟಕದಲ್ಲಿ “ಕನ್ನಡಿಗನೇ ಸಾರ್ವಭೌಮ” ಎಂಬ ಸಂದೇಶ ರವಾನಿಸಬೇಕು. ಇಲ್ಲವಾದರೆ, ಕೈಲಾಗದವರೆಲ್ಲರೂ ಕನ್ನಡಿಗರ ಮೇಲೆ ಸವಾರಿ ಮಾಡಲು ಬಂದಾರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಬೆಳಗಾವಿ ಪಾಲಿಕೆ ಎದುರು ಡಿ.28ರಂದು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಹರಸಾಹಸಪಡುವುದು, ಅದಕ್ಕೆ ಕಾವಲು ಕಾಯುವುದು, ಧ್ವಜ ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡುವುದು ಇವೆಲ್ಲವೂ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆಯಾಗಿದೆ ಎಂದು ಕಿಡಿಕಾರಿದರು.

ಪಾಲಿಕೆ ಎದುರು ಧ್ಜಜ ಸ್ಥಾಪಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳಕೂರ ಎಂಬುವವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಡಲು ಯತ್ನಿಸಿರುವ ಘಟನೆಯೂ ನಡೆದಿದೆ. ಕರ್ನಾಟಕದಲ್ಲಿ ಕನ್ನಡ ಧ್ವಜಕ್ಕಾಗಿ ಹೋರಾಡಿದವರ ಮೇಲೆ ಪದೇ ಪದೇ ದಾಳಿ ನಡೆಯುತ್ತದೆ ಎಂದರೆ, ಅವರಿಗೆ ರಕ್ಷಣೆ ನೀಡಲಾಗುತ್ತಿಲ್ಲ ಎಂದರೆ ಆಳುವವರ ಕನ್ನಡಾಭಿಮಾನ, ನಾಡಪ್ರೇಮ ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.

ಕನ್ನಡಿಗರ ಭಾವೈಕ್ಯದ ಸಂಕೇತವಾಗಿರುವ ಕನ್ನಡ ಧ್ವಜ ಡಿ.31ರ ಒಳಗಾಗಿ ತೆರವು ಗೊಳಿಸಬೇಕು ಎಂದು ಹೇಳಿದಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಈಗ ಕನ್ನಡ ಹೋರಾಟಗಾರರ ಮೇಲೆ ದಾಳಿಯ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಕನ್ನಡಿಗರಿಗೇ ಎಚ್ಚರಿಕೆ ನೀಡುವ ಧೈರ್ಯ ತೋರುವವರಿಗೆ ಶಾಸ್ತಿಯಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Tags:

error: Content is protected !!