Gadag

ಲಿಂಗಾಯತವು ಸನಾತನ ಅಲ್ಲ..ಪ್ರಗತಿಪರ ಚಿಂತನೆಯ ಧರ್ಮ: ಡಾ.ತೋಂಟದ ಸಿದ್ಧರಾಮ ಶ್ರೀಗಳು

Share

ಗದಗ: ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ ‘ಅನುಭವ ಮಂಟಪ’ ನಿರ್ಮಿಸಲು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿರುವುದು ಸಂತೋಷದ ಸಂಗತಿಯಾಗಿದ್ದರೂ, ಆ ನೆಪದಲ್ಲಿ ಸರಕಾರ ನಮ್ಮ ನಾಡಿನ ಬಹುತೇಕ ದಿನಪತ್ರಿಕೆಗಳಿಗೆ ನೀಡಿದ ಜಾಹಿರಾತಿನಲ್ಲಿ ಗಂಭೀರ ದೋಷವಾಗಿರುವುದು ಆಘಾತಕಾರಿಯಾಗಿದೆ ಎಂದು ಗದಗ-ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರಕಾರ ದಿನಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ “ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ” ಎಂಬ ಮೊದಲ ವಾಕ್ಯವೇ ಗಂಭೀರ ದೋಷದಿಂದ ಕೂಡಿದೆ. ಸನಾತನಕ್ಕೂ- ಪ್ರಗತಿಪರ ಚಿಂತನೆಗೂ ಎಣ್ಣೆ-ಶೀಗೇಕಾಯಿ ಸಂಬಂಧ. ಅವೆರಡೂ ಒಂದೆಡೆ ಇರಲಾರವು. ಆದರೆ ಸರಕಾರ ಜಾಹಿರಾತಿನ ಮೂಲಕ ಅವೆರಡನ್ನೂ ಒಂದುಗೂಡಿಸುವ ಪವಾಡವನ್ನೇ ಮಾಡಿದೆ. ಸನಾತನ ಮತ್ತು ಪ್ರಗತಿಪರ ಎಂಬ ಶಬ್ದಗಳನ್ನು ಒಂದುಗೂಡಿಸಬಹುದೆ ಹೊರತು ಸನಾತನ ಮತ್ತು ಪ್ರಗತಿಪರ ವಿಚಾರಧಾರೆಗಳನ್ನು ಒಂದುಗೂಡಿಸಲಾಗದು. ಹನ್ನೆರಡನೆಯ ಶತಮಾನದಲ್ಲಿ ಸನಾತನದ ವರ್ಣವ್ಯವಸ್ಥೆ, ಜಾತಿಭೇದ, ಲಿಂಗಭೇದಗಳನ್ನು ವಿರೋಧಿಸಿ ಪ್ರಗತಿಪರ ಚಿಂತನೆಗೆ ಹೆಸರಾದ ಲಿಂಗಾಯತ ಧರ್ಮವನ್ನು ಸ್ಥಾಪಿಸಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದರೆ ಪ್ರಗತಿಪರ ವಿಚಾರಧಾರೆಯ ಪ್ರತಿಪಾದಕರಾದ ಬಸವಣ್ಣನವರನ್ನು ಸನಾತನ(ಧರ್ಮ)ದ ಪ್ರತಿಪಾದಕರೆಂಬಂತೆ ಬಿಂಬಿಸಿ ಅವರಿಗೆ ಹಿಂದುತ್ವವನ್ನು ಆರೋಪಿಸಿರುವುದು ಬಸವಣ್ಣನವರಿಗೆ, ಬಸವತತ್ತ್ವಾದರ್ಶಗಳಿಗೆ ಮಾಡಿದ ಅಪಚಾರ. ಜಾಹೀರಾತಿನಲ್ಲಿ ಸನಾತನ ಶಬ್ದವನ್ನು ಪ್ರಯೋಗಿಸುವ ಮೂಲಕ ಲಿಂಗಾಯತವೆಂಬ ಸ್ವತಂತ್ರಧರ್ಮದ ಅಸ್ತಿತ್ವವನ್ನು ಅಲ್ಲಗಳೆಯುವ, ಲಿಂಗಾಯತರನ್ನು ಹಿಂದೂಗಳನ್ನಾಗಿಸುವ ತನ್ನ ಕಾರ್ಯಸೂಚಿಯನ್ನು ಸರಕಾರವು ಪ್ರಕಟಿಸಿದೆ. ಲಿಂಗಾಯತ ಧರ್ಮವು ಪ್ರಗತಿಪರ ಚಿಂತನೆಯ ಧರ್ಮವಾಗಿದೆ. ಅನುಭವ ಮಂಟಪವೆಂಬುದು ಈ ಧರ್ಮದ ಪ್ರಗತಿಪರ ಚಿಂತನೆಗಳನ್ನು ನಡೆಸುತ್ತಿದ್ದ ಕಮ್ಮಟವಾಗಿತ್ತು. ನೂತನವಾಗಿ ನಿರ್ಮಿಸಲಾಗುವ ಅನುಭವ ಮಂಟಪದಲ್ಲಿಯೂ ಪ್ರಗತಿಪರ ಚಿಂತನೆಗಳು ನಡೆಯಬೇಕೇ ಹೊರತು ಲಿಂಗಭೇದ, ಜಾತಿಭೇದ, ವರ್ಣಭೇದಗಳನ್ನು ಪ್ರತಿಪಾದಿಸುವ ಸನಾತನದ ಮರುಸೃಷ್ಟಿಯಾಗಬಾರದು ಎಂಬುದು ನಾಡಿನ ಸಮಸ್ತ ಪ್ರಗತಿಪರ ಚಿಂತಕರ ಅಭಿಪ್ರಾಯವಾಗಿದೆ. ಲಿಂಗಾಯತ ಧರ್ಮ ಸನಾತನವಾದುದಲ್ಲ, ಅದು ಹನ್ನೆರಡನೆಯ ಶತಮಾನದಲ್ಲಿ ಉದಿಸಿದ ಪ್ರಗತಿಪರ ಚಿಂತನೆಯ ಧರ್ಮವಾಗಿದೆ. ಅದರ ಜನ್ಮಸ್ಥಳ ಆಗಿನ ಅನುಭವಮಂಟಪ. ನೂತನವಾಗಿ ನಿರ್ಮಾಣಗೊಳ್ಳುವ ಅನುಭವ ಮಂಟಪವನ್ನು ಪ್ರಗತಿಪರ ಚಿಂತನೆಗೆ ಮಾತ್ರ ಮೀಸಲಾಗಿರಿಸಬೇಕೆಂಬ ಆಶಯವನ್ನು ಶ್ರೀಗಳು ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.

Tags:

error: Content is protected !!