30 ವರ್ಷದಲ್ಲಿ ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದನ್ನು ನಾವು ನೋಡಿದ್ದೇವೆ. ಆದ್ರೆ ಯಾವತ್ತೂ ಹಾಫ್ ಪ್ಯಾಂಟ್, ಕರಿ ಟೊಪ್ಪಿಗೆ ಹಾಕಿದ್ದನ್ನು ನಾವು ಎಲ್ಲಿಯೂ ನೋಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಗೆ ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.
ಇತ್ತಿಚೆಗೆ ರಮೇಶ ಜಾರಕಿಹೊಳಿ ನಮ್ಮದು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿರುವ ಕುಟುಂಬ ನಾವು ಕೂಡ ಕರಿ ಟೋಪಿ, ಹಾಫ್ ಪ್ಯಾಂಟ್ ಹಾಕಿದ್ದೇವು ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ ಫೋಟೊವನ್ನು ಶುಕ್ರವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸತೀಶ ಜಾರಕಿಹೊಳಿ ರಿಲೀಸ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ ರಮೇಶ ಜಾರಕಿಹೊಳಿ ಯಾವಾಗಲೂ ಮುಸ್ಲಿಂ ಪರವಾಗಿ ಇದ್ದವನು. ಯಾವಾಗಲೂ ಮುಸ್ಲಿಂ ಪರವಾಗಿ ಹೋರಾಟ ಮಾಡಿದವನು. ಆದ್ರೆ ಈ ರೀತಿ ಖಾಕಿ ಪ್ಯಾಂಟ್, ಕರಿ ಟೊಪ್ಪಿಗೆ ಹಾಕಿದ್ದೇನೆ ಎಂದು ಹೇಳಿದ್ದು ನಮಗೆ ಆಶ್ಚರ್ಯ ತಂದಿದೆ ಎಂದರು. ಬಿಜೆಪಿ ಪಕ್ಷದಲ್ಲಿ ಇದ್ದರೂ ಮೂಲ ಸಿದ್ಧಾಂತದಿಂದ ಬದಲಾಗಬಾರದು. ಮುಸ್ಲಿಂರು, ಶೋಷಿತರ ಪರವಾಗಿ ಇರಬೇಕು ಎಂದು ಸಲಹೆ ನೀಡಿದರು. ಇನ್ನು ಆರ್ಎಸ್ಎಸ್ ಕ್ಲಾಸ್ಗೆ ಕುಳಿತು ರಮೇಶ ಜಾರಕಿಹೊಳಿ ಮೈಂಡ್ ವಾಶ್ ಆಗಿರಬಹುದು. ಅಧಿಕಾರ ಏಂಜಾಯ್ ಮಾಡಲಿ ಆದ್ರೆ ಮೂಲ ಸಿದ್ಧಾಂತ ಬಿಡಬಾರದು ಎಂಬುದು ನಮ್ಮ ಮನವಿ ಎಂದರು.
ಆರ್ಎಸ್ಎಸ್ಗೂ ಜಾರಕಿಹೊಳಿ ಕುಟುಂಬಕ್ಕೂ ಇರುವ ನಂಟಿನ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಇನ್ನು ಸಂಘ ಪರಿವಾರದಲ್ಲಿ ರಮೇಶ ಜಾರಕಿಹೊಳಿ ಅವರು ಯಾವಾಗ ಇದ್ದರೊ ಗೊತ್ತಿಲ್ಲ. ಗೋಕಾಕ್ನಲ್ಲಿ ಪತ್ರಾವಳಿ ಎಂಬ ದೊಡ್ಡ ಫ್ಯಾಮಿಲಿ ಇದೆ. ಇವರದ್ದು ಪಕ್ಕಾ ಆರ್ಎಸ್ಎಸ್ ಕುಟುಂಬವಾಗಿತ್ತು. ಅವರದ್ದು ಒಂದು ಬಂಗಾರದ ಅಂಗಡಿ ಇತ್ತು. ಅಲ್ಲಿಗೆ ಹೋಗಿ ನಮ್ಮ ತಂದೆ ಕುಳಿತುಕೊಳ್ಳುತ್ತಿದ್ದರು. ಅವರ ಜೊತೆ ಗೆಳೆತನವಿತ್ತೆ ಹೊರತು ಆರ್ಎಸ್ಎಸ್ ಶಾಖೆಗೆ ಹೋಗುತ್ತಿರಲಿಲ್ಲ. ಇನ್ನು ಗೋವಾ ವಿಮೋಚನೆ ಹೋರಾಟಕ್ಕೂ ಆರ್ಎಸ್ಎಸ್ಗೂ ಯಾವುದೇ ರೀತಿ ಸಂಬಂಧ ಇಲ್ಲ. ನಮ್ಮ ಕುಟುಂಬಕ್ಕೂ ಆರ್ಎಸ್ಎಸ್ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ ರಮೇಶ ಜಾರಕಿಹೊಳಿ ನಮ್ಮದು ಆರ್ಎಸ್ಎಸ್ ಹಿನ್ನೆಲೆಯ ಕುಟುಂಬ ಎಂದು ನೀಡಿದ್ದ ಹೇಳಿಕೆಗೆ ಸತೀಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ ಚಿತ್ರ ರಿಲೀಸ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.