Uncategorized

ದ್ರಾಕ್ಷಿ ಮತ್ತು ಗೋಡಂಬಿ ಬೆಳೆಯಲ್ಲಿ ಉಂಟಾಗುವ ರೋಗ ಮತ್ತು ಕೀಟ ಬಾಧೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಇಲ್ಲಿವೆ ನೋಡಿ

Share

ಬೆಳಗಾವಿ: ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯನ್ನು ಪ್ರಮುಖವಾಗಿ ಅಥಣಿ, ರಾಯಬಾಗ ಹಾಗೂ ಗೋಕಾಕ ತಾಲ್ಲೂಕುಗಳಲ್ಲಿ ಬೆಳೆಯಲಾಗುತ್ತಿದ್ದು, ಒಟ್ಟು 4998 ಹೆಕ್ಟೇರ್ ಪ್ರದೇಶವನ್ನು ಹೊಂದಿರುತ್ತದೆ. ಪ್ರಸ್ತುತ ಕಳೆದ 2-3 ದಿನಗಳಿಂದ ಹವಾಮಾನ ವೈಪರೀತ್ಯದಿಂದ ಮಳೆ ಬರುತ್ತಿದ್ದು, ಇದರಿಂದ ದ್ರಾಕ್ಷಿ ತೋಟಗಳಿಗೆ ರೋಗ ಮತ್ತು ಕೀಟ ಬರುವ ಸಾಧ್ಯತೆ ಇದ್ದು, ಆದಕಾರಣ ಈ ಕೆಳಕಂಡ ಜೌಷಧಿಗಳನ್ನು ಸಿಂಪರಿಸಲು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ್ರಾಕ್ಷಿ ಗೊಂಚಲುಗಳಲ್ಲಿನ ಕಾಯಿಗಳಲ್ಲಿ ಸಕ್ಕರೆ ಅಂಶ ಕಂಡುಬರುವ ಹಂತದಲ್ಲಿ ಕಾಳುಗಳು ಸೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಂತದಲ್ಲಿ ಚಿಲೇಟೆಡ್ ಕ್ಯಾಲ್ಸಿಯಂ 1 ಗ್ರಾಂ ಜೊತೆಗೆ ಬೋರಾನ್ 1 ಗ್ರಾಂ.ಗಳನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ದ್ರಾಕ್ಷಿ ಗೊಂಚಲಿನಲ್ಲಿನ ಕಾಳುಗಳು ಇನ್ನೂ ನೀರು ತುಂಬುವ ಹಂತ ಪ್ರಾರಂಭವಾಗಿರದೇ ಇದ್ದಲ್ಲಿ ಕಾಳುಗಳು ಸೀಳುವ ಸಾಧ್ಯತೆ ಕಡಿಮೆ.
ಮಳೆಯಾಗಿರುವ ಕಾರಣ ಡ್ರಿಪ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸಬೇಕು.ಈಗಾಗಲೇ ಡೌನಿರೋಗದ ಬಾಧೆ ಇರುವ ತೋಟಗಳಲ್ಲಿ ಫಾಸಟೀಲ್ ಎ.ಎಲ್ (ಅಲಿಯಟ್) 2 ಗ್ರಾಂ. 1ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಡೌನಿ ರೋಗ ಇಲ್ಲದೇ ಇರುವ ತೋಟಗಳಲ್ಲಿ ಮ್ಯಾಂಡಿಪ್ರೊಪಮಿಡ್ (ರೇವಸ್) 0.60 ಮಿ.ಲೀ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ದ್ರಾಕ್ಷಿ ಹಣ್ಣುಗಳು ಸಂಪೂರ್ಣವಾಗಿ ಸಕ್ಕರೆ ಅಂಶ ತುಂಬಿಕೊಂಡಿದ್ದಲ್ಲಿ ಕ್ಯಾಲ್ಸಿಯಂ ಸಿಂಪರಣೆ ನಂತರ ಮರುದಿನ ಟ್ರೈಕೋಡರ್ಮಾ ಎಂಬ ಜೈವಿಕ ಶಿಲೀಂದ್ರ ನಾಶಕವನ್ನು 5 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಅದೇ ರೀತಿ ಜಿಲ್ಲೆಯಲ್ಲಿ ಗೋಡಂಬಿ 5309 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಗೋಡಂಬಿ ಬೆಳೆಯಲ್ಲಿ ಟೀ ಸೊಳ್ಳೆಯು ಹೂ, ಹಣ್ಣು ಮತ್ತು ಬೀಜಗಳಿಂದ ರಸ ಹೀರುವುದರಿಂದ ಹೂಗಳು ಒಣಗುತ್ತವೆ.
ಬೀಜಗಳು ಮುರುಟಾಗುತ್ತವೆ ಮತ್ತು ಅವುಗಳ ಮೇಲೆ ಕಜ್ಜಿಯಂತ ಚುಕ್ಕೆಗಳಾಗಿ ಬೀಜದ ಗುಣಮಟ್ಟ ಕಡಿಮೆಯಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 1 ಮಿ.ಲೀ ಫೆನಿಟ್ರೋಥಿಯಾನ್ 100 ಇಸಿ ಅಥವಾ 1 ಮಿ.ಲೀ ಲ್ಯಾಮಾಡಾ ಸೈಲೋತ್ರ್ರಿನ್ ಬೆರೆಸಿ ಸಿಂಪರಿಸಬೇಕು ಎಂದು ತಿಳಿಸಿದ್ದಾರೆ.

Tags:

error: Content is protected !!